ಮಣಿಪಾಲ: ಶಾಲಾ ಬಸ್ಸೊಂದು ರಸ್ತೆ ಬದಿಯ ತೋಡಿಗೆ ಉರುಳಿ ಬಿದ್ದ ಪರಿಣಾಮ ಏಳು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಸರಳೆಬೆಟ್ಟು ಕೊಡಂಗೆ ದೇವಸ್ಥಾನದ ಸಮೀಪ ಇಂದು ಬೆಳಗ್ಗೆ ನಡೆದಿದೆ.
ಮಣಿಪಾಲ ಕ್ರೈಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳನ್ನು ಕರೆದೆಯುತ್ತಿದ್ದ ಸ್ಕೂಲ್ ಬಸ್ ತಿರುವಿನಲ್ಲಿ ರಿವರ್ಸ್ ತೆಗೆಯುವಾಗ ಚಾಲಕನ ನಿಯಂತ್ರಣ ತಪ್ಪಿ ಸಮೀಪದ ತೋಡಿಗೆ ಉರುಳಿ ಬಿತ್ತನ್ನಲಾಗಿದೆ.
ಈ ಬಸ್ಸಿನಲ್ಲಿ ಸುಮಾರು 20 ಮಕ್ಕಳಿದ್ದು, ಇದರಲ್ಲಿ ಏಳು ಮಕ್ಕಳಿಗೆ ಗಾಯಗಳಾಗಿವೆ. ಈ ಪೈಕಿ ಓರ್ವ ಬಾಲಕಿ ತೀವ್ರ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.
ಶಾಲೆ ಬಸ್ಸಿಗೆ ಹತ್ತಲು ಐದಾರು ಮಕ್ಕಳು ಪ್ರತಿದಿನ ರಸ್ತೆಯ ಬಲಭಾಗದಲ್ಲಿ ನಿಲ್ಲುತ್ತಿದ್ದರು. ಆದರೆ ಇವತ್ತು ರಸ್ತೆ ಎಡಭಾಗದಲ್ಲಿ ನಿಂತಿದ್ದರು. ಇಲ್ಲದಿದ್ದರೆ ಆ ಬಸ್ಸು ಮಕ್ಕಳ ಮೇಲೆ ಉರುಳು ಬೀಳುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಮೂಲಕ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.






















