ಕಾಸರಗೋಡು: ಕಾರೊಂದನ್ನು ಲೀಸಿಗೆ ಪಡೆದು ಅದನ್ನು ಮರಳಿ ಒಪ್ಪಿಸದೇ ಮಾರಾಟ ಮಾಡಿದ ಘಟನೆಯೊಂದು ನಿಲೇಶ್ವರದಲ್ಲಿ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳ ಬಳಿಕ ಕಾರನ್ನು ಪತ್ತೆ ಹಚ್ಚಲಾಗಿದ್ದು, ಕಾರು ಮಾರಾಟ ಮಾಡಿದ ಸುಳ್ಯ ನಿವಾಸಿಗಾಗಿ ಕಾಸರಗೋಡು ಪೋಲೀಸರು ಶೋಧ ಆರಂಭಿಸಿದ್ದಾರೆ.
ನೀಲೇಶ್ವರದ ಬಂಗಳಂ ನಿವಾಸಿ ಅಖಿಲ್ ಎಂಬವರ ಕಾರನ್ನು ( ಕೆ.ಎಲ್.60 ಎಫ್. 0855) ಸುಳ್ಯ ನಿವಾಸಿ ಅಶ್ರಫ್ ಎಂಬಾತ ಆರು ತಿಂಗಳ ಅವಧಿಗೆ ಲೀಸಿಗೆ ಪಡೆದು ಈ ವಂಚನೆ ಎಸಗಿದ್ದಾನೆ. ಕಳೆದ ನವಂಬರ್ ತಿಂಗಳಲ್ಲಿ ಕಾರನ್ನು ಲೀಸಿಗೆ ನೀಡಲಾಗಿತ್ತು.ಆದರೆ ಆರು ತಿಂಗಳ ಬಳಿಕ ಕಾರು ಮರಳಿ ಸಿಗದೇ ಹೋದಾಗ ಅಖಿಲ್ ನ್ಯಾಯಾಲಯಕ್ಕೆ ದೂರು ನೀಡಿದರು. ನ್ಯಾಯಾಲಯದ ಆದೇಶದ ಮೇರೆಗೆ ನೀಲೇಶ್ವರ ಪೋಲೀಸರು ತನಿಖೆ ಕೈಗೆತ್ತಿಕೊಂಡು ಸುಳ್ಯದ ಅಶ್ರಫ್ ನನ್ನು ಹುಡುಕಿ ಹೋದಾಗ ಆತ ತಲೆಮರೆಸಿಕೊಂಡಿದ್ದು, ಅನೇಕ ಕ್ರಿಮಿನಲ್ ಪ್ರಕರಣಗಳ ಆರೋಪಿ ಆತನೆಂಬುದು ತಿಳಿದುಬಂತು.
ಈತನ ಬಂಧನಕ್ಕಾಗಿ ಜಾಲಾಡುತ್ತಿರುವಾಗಲೇ ತಿರುವನಂತಪುರ ಕೊಚ್ಚುವೇಳಿಯಲ್ಲಿ ಪ್ರಸ್ತುತ ಕಾರಿನ ಹೊಗೆ ತಪಾಸಣೆ ಮಾಡಿದ ಸುಳಿವು ಪೋಲೀಸರಿಗೆ ಲಭಿಸಿತು.
ಇದರಂತೆ ಪೋಲೀಸರು ಅಲ್ಲಿಗೆ ಧಾವಿಸಿ, ಹೊಗೆ ತಪಾಸಣೆಗೆ ಕಾರು ತಂದ ವ್ಯಕ್ತಿ ಯ ಬಳಿ ಕಾರು ಪತ್ತೆ ಹಚ್ಚಿದರು. ಕಾರನ್ನು ತಾನು 65 ಸಾವಿರ ರೂಗಳಿಗೆ ಖರೀದಿಸಿದ ಕಾರೆಂದೂ ತಿಳಿಸಿದ್ದಾನೆ, ತಿಳಿಸಿದ್ದರೂ, ಕಾರನ್ನು ನೀಲೇಶ್ವರ ಪೋಲೀಸರು ವಶಪಡಿಸಿ ತಂದಿದ್ದಾರೆ. ಆದರೆ ವಂಚನೆ ನಡೆಸಿದ ಸುಳ್ಯ ನಿವಾಸಿಯ ಸುಳಿವಿಲ್ಲ ಎಂದು ವೋಲೀಸರು ತಿಳಿಸಿದ್ದಾರೆ.