ಬೆಳ್ತಂಗಡಿಯ ವಿವಿದೆಡೆ ಮೇ 19ರಂದು ತಡರಾತ್ರಿ ಕಳ್ಳತನ ನಡೆಸಿ ನಗದು ಸಹಿತ ಇನ್ನಿತರ ವಸ್ತುಗಳನ್ನ ದೋಚಿದ್ದ ಅಂತರ್ ರಾಜ್ಯ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಕೊಯಮುತ್ತೂರಿನ ಜಯಕುಮಾರ್ (55) ಬಂಧಿತ ಆರೋಪಿ. ಈತ ಬೆಳ್ತಂಗಡಿಯಲ್ಲಿ ಸರಣಿ ಕಳ್ಳತನ ನಡೆಸಿರುವುದಲ್ಲದೆ, ಉಪ್ಪಿನಂಗಡಿ ಹಾಗೂ ಸುರತ್ಕಲ್ ನಲ್ಲಿಯೂ ಆತ ಸರಣಿ ಕಳ್ಳತನ ನಡೆಸಿರೋದು ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷ ನೇತೃತ್ವದ ತಂಡಕ್ಕೆ ಗುರುವಾಯನಕೆರೆ ಜಂಕ್ಷನ್ ನಲ್ಲಿ ಜು.8 ರಂದು ಸಂಜೆ 6 ಗಂಟೆಗೆ ಅನುಮಾನಾಸ್ಪದವಾಗಿ ಓರ್ವ ವ್ಯಕ್ತಿ ತಿರುಗಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.
ಈತ ಬೆಳ್ತಂಗಡಿಯಲ್ಲಿ 3 ಕಡೆ, ಉಪ್ಪಿನಂಗಡಿಯಲ್ಲಿ 2 ಕಡೆ, ಸುರತ್ಕಲ್ ನಲ್ಲಿ 1 ಕಡೆ ಕಳ್ಳತನ ಸೇರಿ ಒಟ್ಟು ಆರು ಕಡೆಗಳಲ್ಲಿ ಸರಣಿ ಕಳ್ಳತನ ಮಾಡಿರುವುದನ್ನು ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
ಈತನ ಮೇಲೆ ಕರ್ನಾಟಕ, ತಮಿಳುನಾಡು, ಕೇರಳ ಸೇರಿ ಒಟ್ಟು16 ಪ್ರಕರಣ ದಾಖಲಾಗಿದೆ. ಈತ ಅಂತರ್ ರಾಜ್ಯ ಕುಖ್ಯಾತ ಕಳ್ಳನಾಗಿದ್ದಾನೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದಲ್ಲಿ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್.ಎಮ್ ಮತ್ತು ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





















