ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಐತೂರು ಗ್ರಾಮದ ಕೆರ್ಮಾಯಿ ಎಂಬಲ್ಲಿ ಮೇ 07ರಂದು ಮನೆಯೊಂದರಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಕರೆದುಕೊಂಡು ಬಂದು ಮತಾಂತರ ಹಾಗೂ ಅನೈತಿಕ ಚಟುವಟಿಕೆ ಆರೋಪದ ಬಗ್ಗೆ ತನಿಖೆ ನಡೆಸಿರುವ ಪೊಲೀಸರು, ಮಾಧ್ಯಮಗಳಿಗೆ ವಿವರ ನೀಡಿದ್ದಾರೆ.
ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದಾಗ, ಒಟ್ಟು 4 ಕುಟುಂಬಗಳಿಗೆ ಸೇರಿದ 23 ಜನ ಗಂಡಸರು, ಮಹಿಳೆಯರು ಹಾಗೂ ಮಕ್ಕಳು ಅಲ್ಲಿ ಇರುವುದಾಗಿ ಕಂಡುಬಂದಿರುತ್ತದೆ. ವಿಚಾರಣೆಯಲ್ಲಿ ಅವರೂ ಬೆಂಗಳೂರಿನ ಪರಿಚಯದವರಾಗಿದ್ದು, ಮಂಗಳೂರಿಗೆ ಪ್ರವಾಸದ ನಿಮಿತ್ತ ಬಂದಿರುವುದಾಗಿ ತಿಳಿಸಿರುತ್ತಾರೆ.
ಹಲವು ವರ್ಷಗಳಿಂದ ಪರಿಚಯವಿರುವ ಬೆಂಗಳೂರಿನ ಚರ್ಚ್ ಒಂದರ ಫಾದರ್ ರವರ ತಮ್ಮನ ಮನೆಯಲ್ಲಿ ತಂಗಿರುವುದಾಗಿ ತಿಳಿಸಿರುತ್ತಾರೆ. ವಿಚಾರಣೆಯಲ್ಲಿ ಎಲ್ಲರೂ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಸುಮಾರು 15 ರಿಂದ 20 ವರ್ಷಗಳಿಂದ ಕ್ರಿಶ್ಚಿಯನ್ ಧರ್ಮವನ್ನು ಸ್ವಯಂಪ್ರೇರಿತವಾಗಿ ಪಾಲಿಸಿಕೊಂಡು ಬರುತ್ತಿರುವುದಾಗಿ ಹಾಗೂ ಯಾವುದೇ ಬಲವಂತದ ಮತಾಂತರ ನಡೆದಿರುವುದಿಲ್ಲ ಎಂಬುದು ತಿಳಿದುಬಂದಿರುತ್ತದೆ.
ಹಾಗಾಗಿ ವಿಚಾರದಲ್ಲಿ ಯಾವುದೇ ಅನೈತಿಕ ಚಟುವಟಿಕೆ ಅಥವಾ ಬಲವಂತದ ಮತಾಂತರ ನಡೆದಿರುವ ಬಗ್ಗೆ ವಿಚಾರಣೆಯಲ್ಲಿ ಮಾಹಿತಿ ದೊರೆತಿರುವುದಿಲ್ಲ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.






















