ಪುತ್ತೂರು: ಮಗುವಿಗೆ ಕಾರು ತಾಗಿಸಿದ ಆರೋಪದಲ್ಲಿ ಪುರೋಹಿತರೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಮೇ 4ರಂದು ರಾತ್ರಿ ಕಬಕದ ವಿದ್ಯಾಪುರದಿಂದ ವರದಿಯಾಗಿದೆ.
ಕಬಕ ವಿದ್ಯಾಪುರ ನಿವಾಸಿ ಬಾಲಕೃಷ್ಣ ಜೋಯಿಸ ಅವರ ಪುತ್ರ ಗಣೇಶ್ ವಿ. ಹಲ್ಲೆಗೊಳಗಾದವರು.
ರಾತ್ರಿ ಹೊತ್ತು ಕಾರಿನಲ್ಲಿ ಬರುತ್ತಿದ್ದ ಸಂದರ್ಭ ಮನೆಯೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿರುವುದನ್ನು ಗಮನಿಸಿ, ಕಾರನ್ನು ನಿಧಾನವಾಗಿ ಚಲಾಯಿಸುತ್ತಾ ಬಂದರು. ಅಷ್ಟರಲ್ಲಿ ಮಗುವೊಂದು ಕಾರಿಗೆ ಅಡ್ಡ ಬಂದಿತ್ತು. ಇದೇ ಸಂದರ್ಭ ಕಾರನ್ನು ನಿಲ್ಲಿಸಿ ಏನಾಯಿತು ಎಂದು ನೋಡುತ್ತಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬರು ಮಗುವಿಗೆ ಕಾರು ತಾಗಿಸಿರುವ ಕುರಿತು ತಕರಾರು ತೆಗೆದು ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಗಣೇಶ್ ಭಟ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




















