ಪುತ್ತೂರು: ಶುಕ್ರವಾರ ಕರಾವಳಿಯಾದ್ಯಂತ ತೆರೆ ಕಾಣಲಿರುವ ಗಜಾನನ ಕ್ರಿಕೆಟರ್ಸ್ ತುಳು ಸಿನಿಮಾದ ಉದ್ಘಾಟನಾ ಸಮಾರಂಭ ಗುರುವಾರ ಪುತ್ತೂರು ಜಿಎಲ್ ವನ್ ಮಾಲ್ ನಲ್ಲಿರುವ ಭಾರತ್ ಸಿನೆಮಾಸ್ ನಲ್ಲಿ ನಡೆಯಿತು.
ಡಾ. ಸುರೇಶ್ ಪುತ್ತೂರಾಯ ಮಾತನಾಡಿ, ಸಿನೆಮಾದಲ್ಲಿ ಕ್ರಿಕೆಟಿನ ವಿಚಾರವನ್ನು ತಿಳಿಸುವುದರಿಂದ ಖಂಡಿತವಾಗಿಯೂ ಜನಮನ ಗೆಲ್ಲುತ್ತದೆ. ಈಗ ಐಪಿಎಲ್ ಪಂದ್ಯ ನಡೆಯುವ ಹೊತ್ತು. ಐಪಿಎಲ್ ಪಂದ್ಯಕ್ಕೆ ಸಿಕ್ಕ ಯಶಸ್ಸು ಈ ಸಿನೆಮಾಕ್ಕೂ ಸಿಗಲಿ ಎಂದು ಶುಭಹಾರೈಸಿದರು.
ಜಾರಿ ನಿರ್ದೇಶನಾಲಯ ವಿಶೇಷ ಸರಕಾರಿ ಅಭಿಯೋಜಕ ಮಹೇಶ್ ಕಜೆ ಮಾತನಾಡಿ, ಗಜಾನನ ಕ್ರಿಕೆಟರ್ಸ್ ಬಹುನಿರೀಕ್ಷಿತ ಸಿನಿಮಾ. ಇದು ಬಾಕ್ಸ್ ಆಫೀಸ್ ಹಿಟ್ ಆಗುತ್ತದೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವಂತಾಗಲಿ ಎಂದು ಹಾರೈಸಿದರು.
2007ರಲ್ಲಿ ಟಿ20 ವಿಶ್ವಕಪ್ ಗೆಲ್ಲುತ್ತದೆ. ಆಗ ಒಂದು ಓವರಿನಲ್ಲಿ ಆರು ಸಿಕ್ಸನ್ನು ಯುವರಾಜ್ ಸಿಂಗ್ ಬಾರಿಸಿದ್ದರು. ಅದೇ ರೀತಿಯಲ್ಲಿ ಗಜಾನನ ಕ್ರಿಕೆಟರ್ಸ್ ತುಂಬು ಪ್ರದರ್ಶನ ನೀಡಲಿ ಎಂದರು.
ಕಹಳೆ ವಾಹಿನಿ ಮುಖ್ಯಸ್ಥ ಶ್ಯಾಮ್ ಸುದರ್ಶನ್ ಹೊಸಮೂಲೆ ಮಾತನಾಡಿ, ಯುವಕರು ಸಿನಿಮಾದಲ್ಲಿ ಹೆಸರು ಮಾಡುತ್ತಿರುವುದು ಸಂತೋಷದ ವಿಚಾರ. ಬೇರೆ ಭಾಷೆಯ ಸಿನಿಮಾಗಳ ಜೊತೆಗೆ ಇಂದು ನಮ್ಮ ತುಳು ಭಾಷೆಯೂ ಸಿನಿಮಾವೂ ಸದ್ದು ಮಾಡುತ್ತಿದೆ. ಗಜಾನನ ಕ್ರಿಕೆಟರ್ಸ್ ಮೂವಿ ಉತ್ತಮ ಹೆಸರು ಗಳಿಸಲಿ ಎಂದು ಹಾರೈಸಿದರು.
ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಸಿನೆಮಾಕ್ಕೆ ಶುಭಹಾರೈಸಿದರು.
ಸಿನೆಮಾ ನಾಯಕ ನಟ ವಿನೀತ್ ಕುಮಾರ್ ಮಾತನಾಡಿ, ಗಜಾನನ ಕ್ರಿಕೆಟರ್ಸ್ ಸಿನೆಮಾ ಯಶಸ್ಸಿಗೆ ಸಹಕಾರ ಕೋರಿದರು.
ಉದ್ಯಮಿ ಶಿವರಾಮ್ ಆಳ್ವ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ, ನಿತಿನ್ ರೈ ಕುಕ್ಕುವಳ್ಳಿ, ಅರುಣ್ ಆರ್ಲಪದವು, ಸಮತಾ ಅಮೀನ್, ಅನ್ವಿತಾ ಸಾಗರ್, ಸಿನೆಮಾ ವಿತರಕ ಬಾಲಕೃಷ್ಣ ರೈ ಕುಕ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.
ಹೇಮಾ ಜಯರಾಮ್ ರೈ ಕಾರ್ಯಕ್ರಮ ನಿರೂಪಿಸಿದರು.
ದೇವರಕಂಡ ಟ್ರೋಫಿ:
ಹೆಸರಲ್ಲೇ ಇರುವಂತೆ ಗಜಾನನ ಕ್ರಿಕೆಟರ್ಸ್ ಕ್ರಿಕೆಟ್ ಕಥೆಯನ್ನೇ ಮುಖ್ಯಭೂಮಿಕೆಯಾಗಿಟ್ಟುಕೊಂಡು ಹೊಸೆದ ಸಿನಿಮಾ. ಇದರ ಜೊತೆಗೆ ಬೆಸೆದುಕೊಳ್ಳುವ ಪ್ರೇಮ. ಇಲ್ಲಿ ಕ್ರಿಕೆಟ್ ಆರಂಭವಾಗುವುದಕ್ಕೆ ಒಂದು ಇತಿಹಾಸವಿದೆ. ಹಾಗಾಗಿ ಜಂತೊಟ್ಟು ಹಾಗೂ ಮಿತ್ತೊಟ್ಟು ಪ್ರದೇಶದ ಜನರಿಗೆ ದೇವರಕಂಡ ಟ್ರೋಫಿ ಬಗ್ಗೆ ಎಲ್ಲಿಲ್ಲದ ಉತ್ಸಾಹ ಹಾಗೂ ಪ್ರತಿಷ್ಠೆ. ಇದರ ನಡುವೆ ಇಬ್ಬರು ನಾಯಕಿಯರಿಗೆ ನಾಯಕ ನಟನ ಮೇಲೆ ಪ್ರೀತಿ. ಕೊನೆಗೆ ಪ್ರೀತಿ ಯಾರ ಪಾಲಾಗುತ್ತದೆ. ಪ್ರೀತಿ ಹಾಗೂ ಕ್ರಿಕೆಟ್ ಇವೆರಡರಲ್ಲಿ ನಾಯಕನಟನ ಆದ್ಯತೆ ಹಾಗೂ ಆಯ್ಕೆ ಯಾವುದು ಎನ್ನುವುದೇ ಸಿನಿಮಾದ ಕಥಾವಸ್ತು. ಇದಲ್ಲದೇ ಕಚಗುಳಿ ಇಡುವ ಹಾಸ್ಯ ಸಿನಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೆಲಿಸುವಲ್ಲಿ ಯಶಸ್ವಿಯಾಗಿದೆ.























