ಪುತ್ತೂರು: ಯಾವುದೇ ಸೌಲಭ್ಯಗಳಿಲ್ಲದ ಕಾಲದಲ್ಲಿ, ಭಾರತ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಸಂದರ್ಭದಲ್ಲಿ ಸಿ.ವಿ.ರಾಮನ್ ಅವರು ಶ್ರೇಷ್ಟ ಆವಿಷ್ಕಾರಗಳನ್ನು ವಿಜ್ಞಾನ ಪ್ರಪಂಚದಲ್ಲಿ ಸಾಧಿಸಿತೋರಿದವರು. ಬೆಳಕಿನ ಚದುರುವಿಕೆಗೆ ಸಂಬಂಧಿಸಿದ ರಾಮನ್ ಪರಿಣಾಮಗಳನ್ನು ಕಂಡು ಹಿಡಿದವರು. ರಾಮನ್ ಪರಿಣಾಮದ ದಿನವಾದ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕ ಡಾ. ಎ.ಪಿ ರಾಧಾಕೃಷ್ಣ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾದರಿಗಳನ್ನು ತಯಾರಿ ಮಾಡಿದಾಗ ವಿಜ್ಞಾನದಲ್ಲಿ ಆಸಕ್ತಿ ಮೂಡುತ್ತದೆ. ನಮ್ಮೊಳಗೆ ಯಾಕೆ? ಏನು? ಹೇಗೆ? ಎಂಬ ಪ್ರಶ್ನೆಗಳು ಹುಟ್ಟಿದಾಗಲೇ ವಿಜ್ಞಾನವು ಬೆಳೆಯುತ್ತದೆ. ಇಂದು ತಂತ್ರಜ್ಞಾನದಲ್ಲಿ ಎಷ್ಟೋ ಬದಲಾವಣೆಗಳಾಗಿವೆ. ಕೃತಕ ಬುದ್ಧಿಮತ್ತೆಯು ಕೂಡ ಬೆಳೆದು ನಿಂತಿದೆ. ಆದರೆ ಯಾವ ಅನ್ವೇಷಣೆಗಳೂ ಮನುಷ್ಯನ ಮೆದುಳಿನ ಶಕ್ತಿಯನ್ನು ಸರಿದೂಗಿಸಲು ಸಾಧ್ಯವಿಲ್ಲ. ಯಾಕೆಂದರೆ ಅನ್ವೇಷಣೆಗಳ ಉಸಿರು ಇರುವುದು ನಮ್ಮ ಮೆದುಳಿನಲ್ಲಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಭಾರತದಲ್ಲಿ ವಿಜ್ಞಾನ ಬಹು ಪುರಾತನ ಕಾಲದಲ್ಲೇ ಸಾಕಷ್ಟು ಮುಂದುವರೆದಿತ್ತು. ಹಲವಾರು ಆವಿಷ್ಕಾರಗಳಾಗಿದ್ದವು. ಆದರೆ ಇಂದು ನಮ್ಮ ಪಠ್ಯಪುಸ್ತಕಗಳಲ್ಲಿ ಆ ಆವಿಷ್ಕಾರಗಳನ್ನೆಲ್ಲ ವಿದೇಶಿಯರು ನಡೆಸಿದ್ದಾರೆಂಬ ಸುಳ್ಳು ಮಾಹಿತಿಗಳನ್ನು ಬಿಂಬಿಸುತ್ತಿರುವುದು ದುರಂತದ ಸಂಗತಿಯಾಗಿದೆ. ನಾವು ಸನಾತನ ಭಾರತವನ್ನು ಪುನರ್ನಿರ್ಮಾಣ ಮಾಡಬೇಕು ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ತನ್ವಿ ನಾಗೇಂದ್ರ, ಶ್ರೀಯಾಂ, ಹಾರ್ದಿಕ, ಹೃತಿಕಾ, ವಸಿಷ್ಠ ರಾಮ ತಮ್ಮ ಮಾದರಿಗಳನ್ನು ಪ್ರದರ್ಶಿಸಿದರು. ಖ್ಯಾತಿ ಎ. ಐ ಕುರಿತು, ಹಾಗೂ ವಿಧಿತ ಕ್ಯಾನ್ಸರ್ ಕುರಿತು ವಿಷಯಪ್ರಸ್ತುತಿ ಪ್ರಸ್ತುತಿ ನಡೆಸಿದರು. ವಿಜ್ಞಾನ ಕುರಿತು ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು. ವಿದ್ಯಾರ್ಥಿ ಸುಧನ್ವ ವಿಜ್ಞಾನದ ಕುರಿತು ವಿಚಾರವನ್ನು ಮಂಡಿಸಿದರು.
ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಉಪಸ್ಥಿತರಿದ್ದರು. ಬಹುಮಾನಿತರ ಪಟ್ಟಿಯನ್ನು ಶಿಕ್ಷಕಿ ಗೌರಿ ವಾಚಿಸಿದರು.
ವಿದ್ಯಾರ್ಥಿಗಳಾದ ಆದಿಶ್ರೀ ಪ್ರಾರ್ಥಿಸಿ, ಸಾನ್ವಿ.ಜಿ ಸ್ವಾಗತಿಸಿದರು, ಅನನ್ಯ. ಬಿ ವಂದಿಸಿ, ತನ್ವಿ. ಬಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿಜ್ಞಾನ ದಿನದ ಪ್ರಯುಕ್ತ ವಿದ್ಯಾರ್ಥಿಗಳು ರೂಪಿಸಿದ ಹಲವಾರು ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಯಿತು.























