ಪುತ್ತೂರು: ಹೊರದೇಶ ಹಾಗೂ ಹೊರರಾಜ್ಯಗಳಿಂದ ಅಡಿಕೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ತಂದು ಸ್ಥಳೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಡಿಕೆ ವರ್ತಕರಿಗೆ ಮನವಿ ಮಾಡಿದೆ.
ಈ ಕುರಿತು ಸಂಘದ ಜಿಲ್ಲಾ ಘಟಕದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಯಾವುದೇ ಹೊರದೇಶದ ಅಥವಾ ಹೊರರಾಜ್ಯದ ಅಡಿಕೆಯನ್ನು ಜಿಲ್ಲೆಗೆ ತರಿಸಬಾರದು ಎಂದು ಅಡಿಕೆ ವರ್ತಕರಲ್ಲಿ ವಿನಂತಿಸಲಾಗಿದೆ.
ಕಳಪೆ ಗುಣಮಟ್ಟದ ಅಡಿಕೆಯನ್ನು ಹೊರಗಿನಿಂದ ತರಿಸಿ, ಇಲ್ಲಿನ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಸಂಘಕ್ಕೆ ಮಾಹಿತಿ ಬಂದಿದೆ. ಇಂತಹ ಕ್ರಮಗಳಿಂದ ಸ್ಥಳೀಯ ಅಡಿಕೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಲ್ಲದೆ, ಅಡಿಕೆಯ ದರ ಕುಂಠಿತವಾಗುವ ಸಾಧ್ಯತೆಯಿದೆ ಎಂದು ಸಂಘ ತಿಳಿಸಿದೆ.
ಆದ್ದರಿಂದ ಇನ್ನು ಮುಂದೆ ಹೊರದೇಶ ಅಥವಾ ಹೊರರಾಜ್ಯಗಳಿಂದ ಅಡಿಕೆಯನ್ನು ತಂದು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಸಂಘ ಮನವಿ ಮಾಡಿದೆ. ಈ ರೀತಿಯ ಅಡಿಕೆ ಸಾಗಾಟ ಕಂಡುಬಂದಲ್ಲಿ ರೈತ ಸಂಘ, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳುವಂತೆ ಮಾಡಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.
ಅಡಿಕೆ ವರ್ತಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರೈತರ ಹಿತದೃಷ್ಟಿಯಿಂದ ಸಹಕರಿಸುವಂತೆ ಸಂಘದ ಮುಖಂಡರು ಮನವಿ ಮಾಡಿದ್ದಾರೆ.
























