ಪುತ್ತೂರು: ರೈತರರಿಗೆ ಸರಕಾರದ ವತಿಯಿಂದ ಲಭ್ಯ ಇರುವ ಶೇ.3 ಮತ್ತು ಶೇ.ಸೊನ್ನೆ ಬಡ್ಡಿದರಲ್ಲೇ ಕೃಷಿ ಸಾಲ ಸೌಲಭ್ಯವನ್ನು ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರೂಪೇಶ್ ರೈ ಅಲಿಮಾರ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ, ಸರಕಾರದಿಂದ ಸಾಲದ ಯೋಜನೆ ಇದ್ದರೂ ಸಹಕಾರಿ ಸಂಘಗಳಲ್ಲಿ ಕೃಷಿಕರಿಗೆ ಮತ್ತು ಅಡಿಕೆ ಬೆಳಗಾರರಿಗೆ ವಿನಾ ಕಾರಣ ಸಾಲ ಕೊಡದೆ ಕ್ಯಾನ್ಸಲ್ ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗೆ ರೈತ ಸಂಘದಿಂದ ಪತ್ರ ಬರೆದು ಎಲ್ಲಾ ಪ್ರಾಥಮಿಕ ಸಹಕಾರಿ ಸಂಘಗಳಿಂದ ಸಾಲ ನೀಡುವಂತೆ ಸುತ್ತೋಲೆ ಹೊರಡಿಸುವಂತೆ ಮನವಿ ಮಾಡಿದ್ದೇವು. ಆದರೆ ಇಲ್ಲಿನ ತನಕ ಯಾವುದೇ ಸ್ಪಂಧನೆ ಬಂದಿಲ್ಲ. ಈ ಕುರಿತು ಸರಕಾರದ ಜೊತೆ ರೈತ ಸಂಘವೇ ಮಾತುಕತೆ ನಡೆಸಲಿದ್ದೇವೆ ಎಂದರು.
ರೈತ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಲೋಲಾಕ್ಷ ಕೋಡಿಂಬಾಡಿ ಮಾತನಾಡಿ, ಸಹಕಾರಿ ಸಂಘಗಳಲ್ಲಿ ಯಾವುದೋ ಕಾರಣ ಕೊಟ್ಟು ರೈತರು ಸಾಲ ಸೌಲಭ್ಯ ವಂಚಿತರಾಗಬಾರದು ಎಂದು ಮನವಿ ಮಾಡಿದ್ದೇವೆ. ಈ ನಡುವೆ ಅಕ್ರಮ ಸಕ್ರಮದಡಿಯಲ್ಲಿ ಜಾಗ ಮಂಜೂರುಗೊಂಡರೂ ಈ ಭೂಮಿಗೆ ಸರಕಾರದಿಂದ ಸಿಗುವ ಸಾಲ ಸೌಭ್ಯಕ್ಕೆ ತಡೆ ಒಡ್ಡುತ್ತಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಣೋದ್ ಭಟ್ ಪಾದೇಕಲ್, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ಕೋಡಿಂಬಾಡಿ ಗ್ರಾಮ ಸಮಿತಿ ಕಾರ್ಯದರ್ಶಿ ಯೋಗೀಶ್ ಎಸ್ ಸಾಮಾನಿ ಸಂಪಿಗೆದಡಿ ಉಪಸ್ಥಿತರಿದ್ದರು.






















