Gl harusha
ಸ್ಥಳೀಯ

ದಿ ಪುತ್ತೂರು ಕ್ಲಬ್’ನಲ್ಲಿ ವಿವಿಧ ಸೌಲಭ್ಯಗಳ ಉದ್ಘಾಟನೆ | ಸಾವಿರ ಆಸನ ಸಾಮರ್ಥ್ಯದ ಸುಸಜ್ಜಿತ ಸಭಾಂಗಣ, ಅತಿಥಿ ಕೊಠಡಿಗಳು, ಅತ್ಯಾಧುನಿಕ ಸಿಂಥೆಟಿಕ್ ಟೆನ್ನಿಸ್ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮರೀಲ್‌ನಲ್ಲಿರುವ ದಿ ಪುತ್ತೂರು ಕ್ಲಬ್‌ನಲ್ಲಿ 30 ಸಾವಿರ ಚದರ ಅಡಿಯ ವಿಸ್ತೀರ್ಣದಲ್ಲಿ ನಿರ್ಮಿಸಿದ ವಿವಿಧ ಹೊಸ ಸೌಲಭ್ಯಗಳಾದ ಸಿಂಥೆಟಿಕ್ ಟೆನ್ನಿಸ್ ಕೋರ್ಟ್, 1 ಸಾವಿರ ಆಸನ ಸಾಮರ್ಥ್ಯದ ವಿಶಾಲ ಹಾಲ್, 200 ಆಸನ  ಸಾಮರ್ಥ್ಯದ 2400 ಚದರ ಅಡಿಯ ಎಸಿ ಹಾಲ್, ಎಲೆಕ್ಟ್ರಿಕ್ ವಾಹನಗಳ  ಚಾರ್ಜಿಂಗ್  ಪಾಯಿಂಟ್, ಹವಾನಿಯಂತ್ರಿತ ಕೊಠಡಿಗಳ ಉದ್ಘಾಟನೆ ಫೆ. 8ರಂದು ನಡೆಯಿತು.

ಟೆನ್ನಿಸ್ ಕೋರ್ಟ್ ಉದ್ಘಾಟಿಸಿ, ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ, ಬ್ ಪ್ರಾರಂಭ ಮಡುವುದು ಸುಲಭ. ಆದರೆ ಪ್ರಾರಂಭಿಕ ಹಂತದಿಂದ ಕಡೆಯ ಸದಸ್ಯರ ವಿಶ್ವಾಸ ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಡಾ. ದೀಪಕ್ ರೈ ಮತ್ತು ಅವರ ತಂಡ ಸದಸ್ಯರೆಲ್ಲರ ವಿಶ್ವಾಸ ಗಳಿಸಿ ತುಂಬಾ ಅತ್ಯುತ್ತಮ ಕಾರ್ಯಕ್ರಮ ಮಾಡಿದ್ದಾರೆ. ಸಮಾಜ ಮೆಚ್ಚುವ ಕೆಲಸ ಮಾಡಲು ಕ್ಲಬ್‌ನಲ್ಲಿ ವಿಶಾಲ ಅವಕಾಶವಿದೆ. ಅದನ್ನು ಬಳಸಿಕೊಳ್ಳಬೇಕು. ಕ್ಲಬ್‌ನಲ್ಲಿ ಚಟುವಟಿಕೆಗಳು ದುರುಪಯೋಗ ಆಗಬಾರದು ಎಂದು ಸರಕಾರ ಕ್ಲಬ್ ಕಮಿಟಿ ರಚಿಸಿದೆ. ಅದರಲ್ಲಿ ನಾನು ಇದ್ದೇನೆ. ನಾವು ಕ್ಲಬ್‌ಗಳಿಗೆ ಸಲಹೆ ನೀಡುತ್ತೇವೆ. ಹಾಗಾಗಿ ಕೆಲವು ವಿಚಾರದಲ್ಲಿ ಕ್ಲಬ್‌ನ ಅಧ್ಯಕ್ಷರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದರು.

ಇದನ್ನು ಓದಿ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಸಂದರ್ಶನ

ಸ್ವಾಸ್ಥ್ಯ ಸಮಾಜ ನಮ್ಮ ಹಿರಿಯರು ಕಟ್ಟಿದ್ದಾರೆ. ಅಂತಹ ಸ್ವಾಸ್ಥ್ಯ ಸಮಾಜದ ಚಟುವಟಿಕೆಗಳು ಕ್ಲಬ್‌ನಲ್ಲಿ ನಿರಂತರ ನಡೆಯಬೇಕು ಎಂದ ಅವರು, ನಾವೆಲ್ಲ ನಮ್ಮ ಕಾರ್ಯಕ್ಷೇತ್ರದಲ್ಲಿ ಕಾಯ, ವಾಚ, ಮನಸ ನಿಷ್ಠೆ, ಪ್ರಾಮಾಣಿಕತೆಯಿಂದ ನಮ್ಮ ಕೆಲಸಗಳನ್ನು ಸಮಾಜ ಸೇವೆ ಮಾಡಿದಾಗ ಇಂತಹ ಕ್ಲಬ್‌ಗಳನ್ನು ಹುಟ್ಟು ಹಾಕಲು ಸಾಧ್ಯ ಆಗುತ್ತದೆ. ಈ ಕ್ಲಬ್‌ಗಳಿಂದ ಸಮಾಜಮುಖಿ ಕೆಲಸ ಮಾಡಲು ಸಾಧ್ಯ ಎಂದರು.

ರಾಜ್ಯದಲ್ಲಿ ಬೆಳೆದಿದೆ ಪುತ್ತೂರಿನ ಕ್ಲಬ್:

ಸಾವಿರ ಜನ ಸಾಮಾರ್ಥ್ಯದ ವಿಶಾಲಾ ಹಾಲ್ ಅನ್ನು ಉದ್ಘಾಟಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸುಮಾರು 99 ಕ್ಲಬ್‌ಗಳ ಒಡಂಬಡಿಕೆಯೊಂದಿಗೆ ಬಹಳ ವೇಗವಾಗಿ ರಾಜ್ಯದಲ್ಲಿ ಬೆಳೆದಿರುವ ಕ್ಲಬ್ ಅದು ಪುತ್ತೂರಿನ ದಿ ಪುತ್ತೂರು ಕ್ಲಬ್. ಹಾಗಾಗಿ ಡಾ. ದೀಪಕ್ ರೈ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಬೇಕೆಂದರು.

ಮನುಷ್ಯ ಒತ್ತಡದ ಮಧ್ಯೆ ನೆಮ್ಮದಿಯಿಂದ ಬದುಕುವ ಸಂದರ್ಭ ಶಾಂತವಾಗಿ ಯೋಚನೆ ಮಾಡಲು ಪ್ರಶಾಂತವಾದ ವಾತಾವರಣ ಹೊಂದಿರುವ ಸ್ಥಳ ಹುಡಕುವ ಕಾಲಘಟ್ಟದಲ್ಲಿ ಇಂತಹ ಕ್ಲಬ್ ಮಹತ್ವ ಬೀರುತ್ತದೆ. ತಮ್ಮ ಕಾರ್ಯ ಒತ್ತಡದ ಮಧ್ಯೆ ಪ್ರಶಾಂತವಾಗಿರುವುದಕ್ಕೆ ಮಂಗಳೂರಿನಲ್ಲಿ ಇರುವಂತಹದ್ದು ಇವತ್ತು ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ಮಾಡಿರುವುದು ವಿಶೇಷತೆಯಾಗಿದೆ. ಈ ಕ್ಲಬ್ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.

ಸಮಾಜಕ್ಕೆ ಏನು ಬೇಕೋ ಅದೆಲ್ಲ ಮೂಡಿಬರಲಿ:

ಹವಾನಿಯಂತ್ರಿತ ಸಭಾಂಗಣ ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲೇ ಪುತ್ತೂರಿನ ಕ್ಲಬ್ ದಾಖಲೆಯ ಕೆಲಸ ಮಾಡಲು ಕಾರಣರಾದ ಡಾ. ದೀಪಕ್ ರೈ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರು ಸೇರಿಕೊಂಡು ಒಂದೇ ಮನಸ್ಸಿನಲ್ಲಿ ಯೋಜನೆ ರೂಪಿಸಿದ್ದರಿಂದ ಇಂತಹ ಯಶಸ್ವಿ ಕಾರ್ಯ ನಡೆಸಲು ಸಾಧ್ಯವಾಗಿದೆ. ಇವತ್ತು ಆರೋಗ್ಯ ಸಚಿವರಾದ ದಿನೇಶ್‌ಗೂಂಡುರಾವ್ ಅವರಿಗೆ ಬರಲಿಕ್ಕೆ ಆಸೆ ಇತ್ತು. ಅವರಿಗೆ ಅನ್ಯ ಕಾರ್ಯಕ್ರಮದ ನಿಮಿತ ಬರಲಿಲ್ಲ. ಯು.ಟಿ. ಖಾದರ್ ಅವರು ದುಬೈಯಲ್ಲಿ ಅಮ್ಮ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಊರಿನಲ್ಲಿದ್ದ ನಾವೆಲ್ಲ ಬಂದಿದ್ದೇವೆ. ಮುಂದಿನ ದಿನ ಈ ಕ್ಲಬ್‌ನಿಂದ ಸಮಾಜಕ್ಕೆ ಏನೆನು ಬೇಕೋ ಅದೆಲ್ಲ ನಿಮ್ಮ ತಂಡದಿಂದ ಮೂಡಿ ಬರಲಿ. ಮಹಾಲಿಂಗೇಶ್ವರ ದೇವರ ಆಶೀರ್ವಾದ ನಿಮಗಿರಲಿ ಎಂದರು.

ಕ್ಲಬ್‌ನ ಸದುಪಯೋಗ ಪಡೆಯಬೇಕು:

ಹವಾನಿಯಂತ್ರಿತ ಕೊಠಡಿ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸಂಪತ್ತನ್ನು ಗಳಿಸಿದಾಗ ನೆಮ್ಮದಿಯನ್ನು ಕಳೆದುಕೊಳ್ಳುವ ಈ ಸಮಾಜದಲ್ಲಿ ನೆಮ್ಮದಿ ಮತ್ತು ಸಮೃದ್ಧಿಯನ್ನು ಒಟ್ಟಿಗೆ ಕೊಂಡು ಹೋಗಲು ಮನುಷ್ಯನಿಗೆ ವಿಶ್ರಾಂತಿ ತಾಣದ ಅವಶ್ಯಕತೆ ಇದೆ. ಅದು ಯಾವುದೋ ದೊಡ್ಡ ದೊಡ್ಡ ಮೆಟ್ರೋ ಸಿಟಿಗಳಲ್ಲಿದೆ. ಇವತ್ತು ಪುತ್ತೂರು ನಗರಸಭೆ ಪ್ರದೇಶದಲ್ಲೂ ಕೂಡಾ ವಿಶ್ರಾಂತಿ ತಂಗುದಾಣ ಹತ್ತು ವರ್ಷದ ಹಿಂದೆ ಪುತ್ತೂರಿನ ಮರೀಲ್ ಭಾಗದಲ್ಲಿ ಆಗಿದೆ. ಇವತ್ತು ಅದು ರಾಜ್ಯದ ಪ್ರತಿಷ್ಠಿತ ಕ್ಲಬ್ ಆಗಿ ಮೂಡಿ ಬಂದಿದೆ. ಆಧುನಿಕತೆಯ ಸೊಗಡನ್ನು ಪುತ್ತೂರಿನ ಜನತೆಗೆ ಕ್ಲಬ್‌ನಿಂದ ನೀಡಲಾಗಿದೆ. ಪುತ್ತೂರಿನ ಜನತೆ ಇದನ್ನು ಸದುಪಯೋಗ ಪಡೆದುಕೊಳ್ಳಬೇಕು. ಪುತ್ತೂರು ಮುಂದೆ ಜಿಲ್ಲಾ ಕೇಂದ್ರವಾಗಿ ಮೂಡಿ ಬರಲಿ, ಇಂತಹ ಲಕ್ಷಣ ಕಾಣುತ್ತಿದೆ ಎಂದರು.

ಪುತ್ತೂರು ಕ್ಲಬ್ ಟೌನ್‌ಶಿಪ್ ಮೆರುಗು ನೀಡಿದೆ:

ಇಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಪಾಯಿಂಟ್ ಉದ್ಘಾಟಿಸಿದ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಅವರು ಮಾತನಾಡಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಯೋಜನೆಯೊಂದಿಗೆ ಮಾಡಿದ ಈ ಕ್ಲಬ್  ಎಲ್ಲರಿಗೂ ಪ್ರಯೋಜನವಾಗಲಿ. ಡಾ. ದೀಪಕ್ ರೈ ಅವರು ಈ ಪ್ರದೇಶಕ್ಕೆ ಟೌನ್ ಶಿಫ್ ಮೆರಗು ನೀಡಿದ್ದಾರೆ. ಒಂದೇ ಸೂರಿನಡಿಯಲ್ಲಿ ಎಲ್ಲಾ ಸೌಲಭ್ಯ ದ.ಕ.ಜಿಲ್ಲೆಯಲ್ಲಿ ಎಲ್ಲೂ ಸಿಗಲಿಕ್ಕಿಲ್ಲ. ಆದರೆ ಅದು ಪುತ್ತೂರು ಕ್ಲಬ್‌ನಲ್ಲಿ ಸಿಗಲಿದೆ ಎಂದರು.

ನಗರ ಬೆಳೆಯಲು ಆಗಲು ಸಿವಿಲ್ ಸೊಸೈಟಿಯೂ ಅಗತ್ಯ:

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರಿನಿಂದ ವರ್ಗಾವಣೆಗೊಂಡ ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರ ಮಾತನಾಡಿ ನಗರಾಭಿವೃದ್ಧಿ ವಿಚಾರದಲ್ಲಿ ನೋಡಿದಾಗ ಬೇರೆ ಬೇರೆ ರೀತಿಯಲ್ಲಿ ಸಿಟಿ ಡೆವಲಪ್ ಮಾಡಬೇಕಾಗುತ್ತದೆ. ಅದಕ್ಕೆ ಕೇವಲ ಸರಕಾರದಿಂದ ಮೂಲಭೂತ ಸೌಕರ್ಯ ಅಳವಡಿಸಿದರೆ ಅಭಿವೃದ್ಧಿಯಾಗುವುದಿಲ್ಲ. ಅದಕ್ಕೆ ಸಿವಿಲ್ ಸೊಸೈಟಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪುತ್ತೂರು ಕ್ಲಬ್ ಉತ್ತಮ ಸೌಲಭ್ಯ ನೀಡುತ್ತಿದೆ ಎಂದರು.

ಪುತ್ತೂರು ಕ್ಲಬ್ ಉತ್ತಮ ಕೆಲಸ ಮಾಡುತ್ತಿದೆ:

ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಮಾತನಾಡಿ ಹಲವು ಜನರು ದುರುದ್ದೇಶದಿಂದ ಕ್ಲಬ್‌ಗಳನ್ನು ತೆರೆದು ಸಮಾಜವನ್ನು ಹಾಳು ಮಾಡುವ ಕೆಲಸ ಮಾಡುತ್ತವೆ. ಅಂತವರ ವಿರುದ್ಧ ಕ್ರಮವನ್ನು ತೆಗೆದುಕೊಂಡು ಕಾನೂನು ಕ್ರಮ ಕೈಗೊಳ್ಳುತ್ತೇವೆ. ಆದರೆ ಕ್ರೀಡೆ, ಲಂಚ್, ಈಜು, ಟೆನ್ನಿಸ್, ಕಲ್ಚರ್ ಕಾರ್ಯಕ್ರಮದ ಮೂಲಕ ದಿ ಪುತ್ತೂರು ಕ್ಲಬ್‌ನಲ್ಲಿ ಒಳ್ಳೆಯ ವಾತಾವರಣ, ಕುಟುಂಬ ಸಮೇತರಾಗಿ ಬರಬೇಕು ಅನ್ನುವ ರೀತಿಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವ ಮೂಲಕ ಉತ್ತಮ ಕೆಲಸ ಮಾಡಿದೆ. ಕೇವಲ 10 ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಕ್ಲಬ್‌ಗಳ ಒಡಂಬಡಿಕೆ ಮಾಡಿರುವುದು ಕಡಿಮೆ ಮಾತಲ್ಲ. ಇಷ್ಟೆಲ್ಲ ಸಾಧನೆ ಮಾಡಿದ ಈ ಕ್ಲಬ್  ಇನ್ನೂ ಉತ್ತಮ ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಿ ಎಂದು ಹಾರೈಸಿದರು.

ಗೌರವ ಸಮರ್ಪಣೆ:

ಕ್ಲಬ್‌ನ ನೂತನ ಸೌಲಭ್ಯಗಳ ಕಾಮಗಾರಿಗಳ ವಿನ್ಯಾಸ ರಚನೆ ಮಾಡಿದ ಮಂಗಳೂರುಆಳ್ವ ಎಸೋಸಿಯೇಶನ್‌ನ ಮಾಲಕ ಸುಪ್ರಿತ್ ಆಳ್ವ, ಕನ್‌ಸ್ಟ್ರಕ್ಷನ್  ನಿರ್ವಹಿಸಿದ ರಾಜಶೇಖರ್, ಸೈಟ್ ಸೂಪರ್‌ವೈಸರ್ ತಿಲಕ್ ಗೌಡ ಅವನ್ನು ಗೌರವಿಸಲಾಯಿತು. ದಿ ಪುತ್ತೂರು ಕ್ಲಬ್‌ನ ಉಪಾಧ್ಯಕ್ಷ ದೀಪಕ್ ಕೆ.ಪಿ ಅವರು ಗೌರವ ಸಮರ್ಪಣೆ ಕಾರ್ಯಕ್ರಮ ನಿರ್ವಹಿಸಿದರು.

 

ಸರ್ವಿಸ್ ಮೆಂಬರ್ ಶಿಪ್ ಕಾರ್ಡ್ ಬಿಡುಗಡೆ:

ಕ್ಲಬ್‌ನಲ್ಲಿ ನೂತನವಾಗಿ ಸರ್ವಿಸ್ ಮೆಂಬರ್ ಶಿಫ್ ಕಾರ್ಡ್ ಅನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಡಾ. ದೀಪಕ್ ರೈ ಅವರು ಗೌರವ ಸದಸ್ಯತನವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡರಿಗೆ ನೀಡಿದರು.

ಎಲ್ಲದರಲ್ಲೂ ಕೈ ಹಾಕಿದ್ದೇವೆ, ಯಶಸ್ವಿಯಾಗಿದ್ದೇವೆ:

ಪ್ರಾಸ್ತಾವಿಕವಾಗಿ ಮಾತನಾಡಿದ ದಿ ಪುತ್ತೂರು ಕ್ಲಬ್ ಅಧ್ಯಕ್ಷ ಡಾ. ದೀಪಕ್ ರೈ ಮಾತನಾಡಿ, ಬಹಳಷ್ಟು ಜನ ಈಗ ಸದಸ್ಯತನ ಬಯಸಿದ್ದಾರೆ. ಇದೇ ಮಾತನ್ನು ಹತ್ತು ವರ್ಷದ ಹಿಂದೆ ಹೇಳುವಾಗ ರೂ. 35 ಸಾವಿರ ನೀಡಲು ಮೇಲೆ ಕೆಳಗೆ ನೋಡುತ್ತಿದ್ದರು. ಆದರೆ ಯಾವುದಕ್ಕೂ ನಿಷ್ಠೆ ಬೇಕು. ಆ ನಿಷ್ಠೆ ನನ್ನಲ್ಲಿ ನಮ್ಮ ಆಡಳಿತ ಸದಸ್ಯರಲ್ಲೂ ಇತ್ತು. ಇವತ್ತಿಗೆ ಹತ್ತು ವರ್ಷದಲ್ಲಿ ಕನಸು ಕಾಣುವುದಕ್ಕಿಂತ ಮೂರು ಪಾಲು ಹೆಚ್ಚು ಮಾಡಿ ತೋರಿಸಿದ್ದೇವೆ. 10 ವರ್ಷದಲ್ಲಿ ಇಷ್ಟು ಎತ್ತರಕ್ಕೆ ಬೆಳೆದ ಕ್ಲಬ್ ಎಲ್ಲೂ ಇಲ್ಲ. ಒಂದು ಉದ್ದೇಶವಿಟ್ಟು ಈ ಕ್ಲಬ್ ಮಾಡಿದ್ದೆ. ನಾವು ಕೇವಲ ಸೌಲಭ್ಯಗಳನ್ನು ಮಾತ್ರ ಅಭಿವೃದ್ಧಿ ಮಾಡಿದ್ದಲ್ಲ. ಬೇರೆ ವಿವಿಧ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ್ದೇವೆ. ಕ್ರೀಡೆ, ಸಾಮಾಜಿಕ, ಶಿಕ್ಷಣ ಕ್ಷೇತ್ರದಲ್ಲೂ ಸಮಾಜ ಸೇವೆ ಮಾಡಿದ್ದೇವೆ. ಇದು ನನ್ನ ಕನಸು. ನಾವು ಕನಸು ಕಂಡಿದ್ದೇವೆ. ಇವತ್ತು ಪೂರ್ಣಗೊಂಡಿದೆ. ಆದರೆ ಇನ್ನೊಂದು ಹೊಸ ಕನಸು ಬರುತ್ತಿದೆ. ಮಹಾಲಿಂಗೇಶ್ವರನ ಆಶೀರ್ವಾದ ಇದ್ದರೆ ಪುತ್ತೂರಿನ ಭವಿಷ್ಯಕ್ಕೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುವ ಚಿಂತನೆ ಇದೆ. ಈ ಪ್ರದೇಶದಲ್ಲಿ ಪರಿಸರ ಉಳಿವಿನ ಕೆಲಸವೂ ಮಾಡಿದ್ದೇವೆ. ಇಲ್ಲಿನ ಮಳೆ ನೀರು ಎಲ್ಲಾ ನಮ್ಮ ಬೋರ್‌ವೆಲ್‌ಗೆ ಹೋಗುತ್ತದೆ. ಉಪಯೋಗಿಸಿದ ಎಲ್ಲಾ ನೀರು ಮರುಶುದ್ದೀಕರಣಗೊಂಡು ಉದ್ಯಾನವನಕ್ಕೆ ಉಪಯೋಗ ಆಗುತ್ತದೆ ಎಂದ ಅವರು ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ಬಯಸಿದರು.

ತನ್ವಿ ಶೆಣೈ ಪ್ರಾರ್ಥಿಸಿದರು. ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈ ವಂದಿಸಿದರು. ಕ್ಲಬ್‌ನ ಉಪಾಧ್ಯಕ್ಷ ದೀಪಕ್ ಕೆ.ಪಿ, ಕೋಶಾಧಿಕಾರಿ ದಿವಾಕರ್ ಕೆ.ಪಿ, ಜೊತೆ ಕಾರ್ಯದರ್ಶಿ ಪ್ರಭಾಕರ್ ಎ.ಎಮ್, ರೂಪೇಶ್ ಶೇಟ್, ಆಡಳಿತ ನಿರ್ದೇಶಕರಾದ ಬೂಡಿಯಾರ್ ರಾಧಾಕೃಷ್ಣ ರೈ, ಶಿವರಾಮ ಆಳ್ವ, ನಿತಿನ್ ಪಕ್ಕಳ, ಮನೋಜ್ ರೈ, ಚಂದ್ರಶೇಖರ್, ಪ್ರಶಾಂತ್ ಶೆಣೈ, ಜಯಂತ್ ನಡುಬೈಲು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಆಡಳಿತ ನಿರ್ದೇಶಕ ಕ್ಸೇವಿಯರ್ ಡಿಸೋಜ, ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುಹಾನ ಸಫರ್ ಕಾರ್ಯಕ್ರಮ ನಡೆಯಿತು. ಕುಂಬ್ಳೆ ಡಾ. ಅನಂತ ಪ್ರಭು ಮತ್ತು ತಂಡದಿಂದ ಕಾರ್ಯಕ್ರಮ ನಡೆಯಿತು. ಕುಂಬ್ಳೆ ನರಸಿಂಹ ಪ್ರಭು ಅವರು ಮಿಮಿಕ್ರಿ ನಡೆಸಿದರು. ವಿದುಷಿ ಪವಿತ್ರಾ ರೂಪೇಶ್, ವಿದ್ಯಾಸುವರ್ಣ ಮತ್ತು ಉಮಾಕಾಂತ್ ನಾಯಕ್, ಮುಲ್ಕಿಯ ರಾಜೇಶ್ ಭಾಗವತ್ ಮತ್ತು ತಂಡ ವಿವಿಧ ಹಾಡುಗಳನ್ನು ಹಾಡಿದರು. 

 


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts