ಪುತ್ತೂರು:ಯಾವುದೇ ವ್ಯವಹಾರ ಮಾಡುವಾಗ ಗ್ರಾಹಕರು ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಸ್ವಯಂ ಜಾಗೃತಿಯಿಂದ ನಡೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಪುತ್ತೂರಿನ ಅನಿಕೇತನ ಲಾ ಚೇಂಬರ್ಸ್ನ ನ್ಯಾಯವಾದಿ ಕೃಷ್ಣ ಪ್ರಸಾದ್ ನಡ್ಸಾರ್ ತಿಳಿಸಿದ್ದಾರೆ.
ರೋಟರಿ ಕ್ಲಬ್ ಪುತ್ತೂರು ವತಿಯಿಂದ ಆಯೋಜಿಸಲಾದ “ಗ್ರಾಹಕ ಹಕ್ಕುಗಳು ಮತ್ತು ಹಿತರಕ್ಷಣೆ” ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಇ-ಕಾಮರ್ಸ್ ಯುಗದಲ್ಲಿ ಎಷ್ಟೇ ಎಚ್ಚರಿಕೆಯಿಂದ ವ್ಯವಹಾರ ನಡೆಸಿದರೂ ಮೋಸಗಳ ಸಂಭವ ಹೆಚ್ಚಾಗುತ್ತಿರುವುದನ್ನು ಉಲ್ಲೇಖಿಸಿದರು.
ಗ್ರಾಹಕ ಕಾಯ್ದೆಯ ವಿವಿಧ ಆಯಾಮಗಳು, ಗ್ರಾಹಕರ ಹಕ್ಕುಗಳು ಹಾಗೂ ಕರ್ತವ್ಯಗಳು, ಮೋಸ ಅಥವಾ ಹಕ್ಕುಚ್ಯುತಿ ನಡೆದ ಸಂದರ್ಭಗಳಲ್ಲಿ ಲಭ್ಯವಿರುವ ಕಾನೂನು ಪರಿಹಾರಗಳ ಬಗ್ಗೆ ಅವರು ಸವಿವರವಾಗಿ ಮಾಹಿತಿ ನೀಡಿದರು. ಗ್ರಾಹಕರು ಯಾವುದೇ ಸಮಸ್ಯೆ ಎದುರಾದಾಗ ತಕ್ಷಣ ಕಾನೂನು ನೆರವು ಪಡೆಯಬೇಕು ಎಂದು ಅವರು ಸಲಹೆ ನೀಡಿದರು.ಕಾರ್ಯಕ್ರಮವು ರೋಟರಿ ಜಿ.ಎಲ್. ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ರೋ. ಡಾ. ಶ್ರೀಪ್ರಕಾಶ್ ವಹಿಸಿದ್ದರು. ಜಾಗತೀಕರಣದ ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ ಸೂಕ್ತ ಮಾಹಿತಿ ಮತ್ತು ಜಾಗೃತಿ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಕ್ಲಬ್ ಕಾರ್ಯದರ್ಶಿ ರೋ. ಸುಬ್ಬಪ್ಪ ಕೈಕಂಬ, ನಿವೃತ್ತ ಪ್ರಾಧ್ಯಾಪಕ ರೋ. ದತ್ತಾತ್ರೇಯ ರಾವ್ ಹಾಗೂ ಪ್ರಗತಿ ಆಸ್ಪತ್ರೆಯ ವೈದ್ಯರಾದ ಡಾ. ಶ್ರೀಪತಿ ರಾವ್ ಉಪಸ್ಥಿತರಿದ್ದು ಶುಭಾಶಯ ಕೋರಿದರು.






















