ಪುತ್ತೂರು: ನೋಂದಣಿ ಕಚೇರಿಯಲ್ಲಿ ಅನ್ಡಿವೈಡೆಡ್ ರೈಟ್ಸ್( ಪಾಲುದಾರ ಆಸ್ತಿ ನೋಂದಣಿ) ನೋಂದಣಿಯಾಗದ ಕಾರಣ ತೀವ್ರ ಸಮಸ್ಯೆ ಉಂಟಾಗುತ್ತಿದ್ದು, ಸಮಸ್ಯೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಕಂದಾಯ ಇಲಾಖೆ ಕಾರ್ಯದರ್ಶಿಯವರಿಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ ಸಲ್ಲಿಸಿದ್ದಾರೆ.
ಗುರುವಾರ ಇಲಾಖಾ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಮುನೀಶ್ ಮೌದ್ಗಿಲ್ ಅವರನ್ನು ಭೇಟಿಯಾದ ಶಾಸಕರು ಈ ಸಮಸ್ಯೆಯ ಕಳೆದ ಹಲವಾರು ದಿನಗಳಿಂದ ಆಗುತ್ತಿದ್ದು ಪಾಲುದಾರ ಆಸ್ತಿ ನೋಂದಣಿ ಮಾಡುವಲ್ಲಿ ತೊಂದರೆಯಾಗಿದ್ದು ಸಾರ್ವಜನಿಕರಿಗೆ ಇದರಿಂದ ತೀವ್ರ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ನೋಂದಣಿ ಕಚೇರಿಯಲ್ಲಿ ಈ ಸಮಸ್ಯೆ ಸೇರಿದಂತೆ ಇತರೆತಾಂತ್ರಿಕ ಸಮಸ್ಯೆಗಳಿದ್ದು ಅವುಗಳನ್ನು ಕೂಡಲೇ ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ಸಮಸ್ಯೆಯ ಬಗ್ಗೆ ತಕ್ಷಣ ಗಮನಹರಿಸಿ ಕ್ರಮಕೈಗೊಳ್ಳುವುದಾಗಿ ಅಧಿಕಾರಿ ಶಾಸಕರಿಗೆ ತಿಳಿಸಿದ್ದಾರೆ.
ಮನವಿ ಮಾಡಿದ್ದೇನೆ:
ಯಾವುದೇ ಇಲಾಖಾ ಕಚೇರಿ ಇರಲಿ ಅದು ಜನರ ಸೇವೆಗೆ ಇರುವಂತದ್ದು ಅಲ್ಲಿ ದೋಷಗಳು ಕಂಡು ಬಂದಲ್ಲಿ ತಕ್ಷಣ ಇಲಾಖಾ ಮೇಲಧಿಕಾರಿಗಳು ಸರಿಪಡಿಸಬೇಕು. ಪುತ್ತೂರು ಉಪ ನೋಂದಣಿ ಕಚೇರಿಯಲ್ಲಿ ಪಾಲುದಾರ ಆಸ್ತಿ ನೋಂದಣಿಯಾಗುತ್ತಿಲ್ಲ ಎಂಬ ದೂರುಗಳು ಬಂದ ಕಾರಣ ಅದನ್ನು ಸರಕಾರದ ಗಮನಕ್ಕೆ ತಂದಿದ್ದೇನೆ. ಇದಲ್ಲದೆ ನೋಂದಣಿ ಕಚೇರಿಯಲ್ಲಿರುವ ಎಲ್ಲಾ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಎಂದು ಮನವಿ ಮಾಡಿದ್ದೇನೆ.
ಅಶೋಕ್ ರೈ, ಶಾಸಕರು, ಪುತ್ತೂರು