ಪುತ್ತೂರು: ರಾಜಕಾರಣದಲ್ಲಿ ಪ್ರತಿ ನಿಮಿಷವೂ ಪ್ರಾಮುಖ್ಯ. ಹಾಗಾಗಿ ಮಧ್ಯಾಹ್ನ ಮತ್ತೆ ಬೆಂಗಳೂರಿಗೆ ತಲುಪಬೇಕಾಗಿದೆ ಎಂದು ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಹೇಳುವ ಮೂಲಕ ರಾಜ್ಯಸಭೆ ಚುನಾವಣೆಯ ಒತ್ತಡವನ್ನು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೂಚಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯಸಭೆ ಸೀಟಿಗಾಗಿ ತಾನು ಲಾಭಿ ಮಾಡುವುದಿಲ್ಲ. ಆದರೆ ಅಪೇಕ್ಷಿತ ಹೌದು. ಓರ್ವ ಸ್ಪರ್ಧಿಯಾಗಿ ನಾನು ಗುರುತಿಸಿಕೊಳ್ಳುವುದಿಲ್ಲ. ಹಾಗೆಂದು ರಾಜ್ಯಸಭೆ ಅಥವಾ ರಾಜ್ಯಪಾಲರ ಜವಾಬ್ದಾರಿ ನೀಡಿದರೆ ವಹಿಸಿಕೊಳ್ಳುತ್ತೇನೆ ಎಂದು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದರು.
ನಾನೇನು ಸನ್ಯಾಸಿಯಲ್ಲ. ನಾನೂ ಒಂದು ರಾಜ. ಆದರೆ ನಾನೀಗ ಸಂತೃಪ್ತ ರಾಜಕಾರಣಿ. ರಾಜ್ಯಸಭೆ ಸೀಟಿನ ಬಗ್ಗೆ ಕೋರ್ ಕಮಿಟಿಯ 13 ಮಂದಿ ತನ್ನ ಹೆಸರನ್ನೇ ಸೂಚಿಸಿದ್ದಾರೆ. ಇನ್ನೇನಿದ್ದರೂ ರಾಷ್ಟ್ರೀಯ ನಾಯಕರ ತೀರ್ಮಾನ. ಅವರು ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ತಾನು ಬದ್ಧ ಎಂದರು.
ಪುತ್ತೂರು ರಾಜಕಾರಣದ ಶುದ್ಧೀಕರಣ ತನ್ನ ಲೆವೆಲಿನದ್ದಲ್ಲ:
ರಾಜ್ಯ ರಾಜಕಾರಣದಲ್ಲಿ ಶುದ್ಧೀಕರಣ ನಡೆಯುತ್ತಾ ಇದೆ. ಯತ್ನಾಳ್ ಅವರನ್ನು ಗಂಗಾಸ್ನಾನಕ್ಕೆ ಕಳುಹಿಸಿಕೊಟ್ಟಿದ್ದೇವೆ. ಸೋಮಶೇಖರ್, ಶಿವರಾಮ ಹೆಬ್ಬಾರ್ ಅವರನ್ನೂ ಕಳಿಸಿದ್ದೇವೆ. ಹಾಗೆಂದು ರಾಜಕಾರಣದಲ್ಲಿ ಎಲ್ಲವೂ ಶುದ್ದೀಕರಣ ರಾಜಕಾರಣ ಎಂದು ಹೇಳಲಾಗುವುದಿಲ್ಲ. ಶುದ್ದೀಕರಣ ಮಾಡುವ ಪ್ರಯತ್ನದಲ್ಲಿ ಸದಾನಂದ ಗೌಡ ಯಶಸ್ವಿಯಾಗಿದ್ದಾನೆ. ಆದರೆ ಪುತ್ತೂರು ರಾಜಕಾರಣದ ಶುದ್ಧೀಕರಣ ನನ್ನ ಲೆವೆಲಿನದ್ದಲ್ಲ. ತಾನು ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಅಧ್ಯಕ್ಷನಾಗಿ, ಕೇಂದ್ರದ ಸಚಿವನಾಗಿ ಎಲ್ಲವನ್ನೂ ಮಾಡಿದವನು. ಇನ್ನು ಕೆಳಗಿನದಕ್ಕೆ ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಒಕ್ಕಲಿಗ ವ್ಯಕ್ತಿ ಸಿಎಂ ಆಗಿರುವುದಕ್ಕೆ ಗೌರವವಿದೆ. ಆದರೆ…
ಡಿ.ಕೆ. ಶಿವಕುಮಾರ್ ಒಕ್ಕಲಿಗ ವ್ಯಕ್ತಿ. ಅವರು ಛಲದಂಕ ಮಲ್ಲನಂತೆ ಹೋರಾಡಿ ಮುಖ್ಯಮಂತ್ರಿ ಆಗಿದ್ದಾರೆ. ಇದಕ್ಕಾಗಿ ಗೌರವವಿದೆ. ಆದರೆ ರಾಜಕಾರಣದಲ್ಲಿ ಅಂದುಕೊಂಡದ್ದನ್ನು ಯಶಸ್ವಿಯಾಗಿ ಪೂರೈಸಲು ಈಗಿನ ದಿನದಲ್ಲಿ ಅಸಾಧ್ಯ. ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿರುವ ವಿದ್ಯಮಾನವೇ ಇದಕ್ಕೆ ಸಾಕ್ಷಿ. ಈಗಾಗಲೇ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಇದನ್ನೆಲ್ಲಾ ನೋಡಿದಾಗ ಡಿ.ಕೆ. ಶಿವಕುಮಾರ್ ಅವರು ಮುಳ್ಳಿನ ಹಾಸಿಗೆಯಲ್ಲಿ ಮಲಗಿದಂತೆ ಭಾಸವಾಗುತ್ತದೆ. ಭೀಷ್ಮನಂತೆ ಇದು ಕೊನೆಯ ದಿನಗಳಾಗಿರಬಹುದು ಎಂದರು.























