ಪುತ್ತೂರು: ಶ್ರೀ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ವತಿಯಿಂದ ಶ್ರೀ ಶಂಕರ ಭಗವತ್ಪಾದರ ಜಯಂತ್ಯುತ್ಸವ ಪ್ರಯುಕ್ತ ಮೇ 3, ಭಾನುವಾರದಂದು ಪುತ್ತೂರಿನ ಬಪ್ಪಳಿಗೆಯಲ್ಲಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ‘ಶಂಕರ ವಿಜಯ’ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಪುತ್ತೂರು, ಬಂಟ್ವಾಳ, ಸುಳ್ಯ, ಮಂಜೇಶ್ವರ, ಕಡಬ ಮತ್ತು ಕಾಸರಗೋಡು ತಾಲೂಕುಗಳ ಧರ್ಮಾಭಿಮಾನಿಗಳಿಗಾಗಿ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹತ್ತರಿಂದ ಹದಿನಾಲ್ಕು ವರ್ಷದ ವಿದ್ಯಾರ್ಥಿಗಳಿಗಾಗಿ ಗಣೇಶ ಪಂಚರತ್ನ ಮತ್ತು ಗುರುಪಾದುಕಾ ಸ್ತೋತ್ರದ ಕಂಠಪಾಠ ಸ್ಪರ್ಧೆ, ಹದಿನೈದರಿಂದ ಹದಿನೆಂಟು ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಶ್ರೀ ಶಂಕರಾಚಾರ್ಯರಲ್ಲಿದ್ದ ಹಿರಿಯರನ್ನು ಗೌರವಿಸುವ ಮತ್ತು ಶಿಷ್ಯ ವಾತ್ಸಲ್ಯದ ಗುಣ ಎಂಬ ವಿಷಯದ ಬಗೆಗಿನ ಭಾಷಣ ಸ್ಪರ್ಧೆ ಹಾಗೂ ಹದಿನೆಂಟು ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಶ್ರೀ ಶಂಕರ ಭಗವತ್ಪಾದರ ಜೀವನದಲ್ಲಿ ನಾ ಕಂಡ ಮೌಲ್ಯಗಳು ಎಂಬ ವಿಷಯದ ಬಗೆಗಿನ ಭಾಷಣ ಸ್ಪರ್ಧೆ ನಡೆಯಲಿದೆ.
ಸಾರ್ವಜನಿಕ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದ್ದು ಶ್ರೀಮದ್ ವಾಲ್ಮೀಕಿ ರಾಮಾಯಣ, ಶ್ರೀ ಶಂಕರ ಭಗವತ್ಪಾದರ ಜೀವನ ಮತ್ತು ಉಪದೇಶಗಳು ಎಂಬ ವಿಷಯವನ್ನಾಧರಿಸಿ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ವಯಸ್ಸಿನ ನಿರ್ಬಂಧಗಳಿಲ್ಲದೆ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಬಹುದಾಗಿದೆ.
ಲ್ಯಾಪ್ ಟಾಪ್ / ಟ್ಯಾಬ್ ಮೊದಲಾದ ಬಹುಮಾನಗಳು:
ಪ್ರತಿಯೊಂದು ವಿಭಾಗದಲ್ಲೂ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಬಹುಮಾನಗಳು ಲ್ಯಾಪ್ ಟಾಪ್, ಟ್ಯಾಬ್ ಮೊದಲಾದ ಆಕರ್ಷಕ ವಸ್ತು ವಿಶೇಷಗಳನ್ನು ಒಳಗೊಂಡಿವೆ. ಒಟ್ಟು ಎರಡೂವರೆ ಲಕ್ಷ ರೂಪಾಯಿಗಳಿಗಿಂತಲೂ ಅಧಿಕ ಮೊತ್ತದ ಬಹುಮಾನಗಳು ಈ ಸ್ಪರ್ಧೆಯಲ್ಲಿ ಒಳಗೊಂಡಿವೆ. ಜತೆಗೆ ಪ್ರತಿ ಸ್ಪರ್ಧೆಯಲ್ಲೂ ಆಯ್ದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳು ದೊರೆಯಲಿವೆ.
ಜಗದ್ಗುರುಗಳಿಂದಲೇ ಬಹುಮಾನ ವಿತರಣೆ:
ಈ ಮೇಲಿನ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಮೇ 7ರಂದು ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಬಹುಮಾನ ವಿತರಿಸಿ ಹರಸಲಿದ್ದಾರೆ.
ನೋಂದಾವಣೆ:
ಈ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ಮೇಲೆ ಉಲ್ಲೇಖಿಸಿದ ಐದು ತಾಲೂಕುಗಳ ಅಥವಾ ಈ ತಾಲೂಕುಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅವಕಾಶವಿದ್ದು, ಮೇ 1ರ ಮೊದಲಾಗಿ ನೋಂದಾವಣೆ ಮಾಡುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ : 94834 35696, 94839 34170 ಅಥವಾ 9449102082 ಸಂಖ್ಯೆಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.






















