ಪುತ್ತೂರು: ನಾಡಿನ ಸೈನಿಕರು ಎಲ್ಲವನ್ನೂ ನಮಗಾಗಿ ಧಾರೆ ಎರೆದವರು. ಬಿಸಿಲು, ಮಳೆ, ಚಳಿ ಯಾವುದನ್ನು ಲೆಕ್ಕಿಸದೆ ಕರ್ತವ್ಯವೇ ಮುಖ್ಯ ಎಂಬಂತೆ ತಾಯಿ ಭಾರತಿಯ ಸೇವೆಯನ್ನು ಹಗಲಿರುಳು ದುಡಿಯುತ್ತಾರೆ. ಇಂತಹಾ ಸೈನಿಕರಿಗೆ ಪ್ರತಿನಿತ್ಯ ಗೌರವ ಸಲ್ಲಿಸಬೇಕು, ಸೈನಿಕರು ಸದಾ ಪ್ರಾತಃ ಸ್ಮರಣೀಯರು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ತಿಳಿಸಿದರು.

ಪುತ್ತೂರು ಮಾಜಿ ಸೈನಿಕರ ಸಂಘ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ನಿವೃತ್ತ ಸೈನಿಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೈನಿಕರು ದೇಹದ ರಕ್ತವನ್ನು ದೇಶಕ್ಕೋಸ್ಕರ ಸಮರ್ಪಣೆ ಮಾಡುತ್ತಾರೆ. ಪ್ರತಿಯೊಬ್ಬ ನಾಗರಿಕ ದೇಶಕ್ಕೆ ಮೊದಲು ಗೌರವ ಸಲ್ಲಿಸಬೇಕು. ಸೈನಿಕರು ವಿದ್ಯಾರ್ಥಿಗಳ ಪಾಲಿಗೆ ನಿಜವಾದ ಹೀರೊಗಳು. ಅಂಬಿಕಾದ ಪ್ರತೀ ವಿದ್ಯಾರ್ಥಿಗಳೂ ದೇಶ ರಕ್ಷಣೆಗೆ ಕಂಕಣ ಬದ್ಧರಾಗಿ ದುಡಿಯಬೇಕು ಎಂದರು.
ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ವೀರ ಯೋಧರಾದ ಹವಾಲ್ದಾರ್ ವಿಶ್ವನಾಥ್ ಹಾಗೂ ಹವಾಲ್ದಾರ್ ಅಶೋಕ್ ನೆಲಪ್ಪಾಲ್ ಅವರನ್ನು ಪುತ್ತೂರು ಕಿಲ್ಲೆ ಮೈದಾನದ ಬಳಿಯಿಂದ ವಿದ್ಯಾರ್ಥಿಗಳ ಜೊತೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕಾಲೇಜಿಗೆ ಕರೆತರಲಾಯಿತು. ವಿದ್ಯಾಲಯದಲ್ಲಿ ಆರತಿ ಬೆಳಗಿ ತಿಲಕ ಇಟ್ಟು ವೇದಿಕೆಗೆ ಸ್ವಾಗತಿಸಲಾಯಿತು. ಇಬ್ಬರೂ ಸೈನಿಕರನ್ನು ಶಾಲು, ಪೇಟ, ಫಲ- ಪುಷ್ಪ ಸ್ಮರಣಿಕೆಗಳೊಂದಿಗೆ ಗೌರವ ಸನ್ಮಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿದ ಹವಾಲ್ದಾರ್ ವಿಶ್ವನಾಥ್ ಹಾಗೂ ಹವಾಲ್ದಾರ್ ಅಶೋಕ್ ನೆಲಪ್ಪಾಲ್ ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು.
ಪುತ್ತೂರು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಾರ್ಜೆಂಟ್ ವಸಂತ ಕುಮಾರ್ ಮಾತನಾಡಿ, ಸೈನಿಕರು ಅಂದರೆ ಶಿಸ್ತಿನ ಸಿಪಾಯಿಗಳು, ಕರ್ತವ್ಯದಲ್ಲಿರುವಾಗ ಕಣ್ಣೆದುರು ಕಾಣುವುದು ದೇಶಸೇವೆ ಮಾತ್ರ ಎಂದು ನಿವೃತ್ತರಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ನಿವೃತ್ತ (ಸೇನಾನಿ) ಪ್ರೆಟ್ಟಿ ಆಫೀಸರ್ ನಾರಾಯಣ ಭಟ್ ಎನ್. ಕೆ. ಉಪಸ್ಥಿತರಿದ್ದರು.
ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಜಿ. ವೈಷ್ಣವಿ ಪೈ ಹಾಗೂ ಶರಣ್ಯಾ ಎಸ್. ನಿವೃತ್ತ ಯೋಧರ ಪರಿಚಯವನ್ನು ಮಾಡಿದರು.
ವರ್ಷಲಕ್ಷ್ಮಿ ಮತ್ತು ಬಳಗದ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ವಿದ್ಯಾಲಯದ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.






















