ಪುತ್ತೂರು: ಸ್ವಾತಂತ್ರ್ಯವನ್ನು ನಾವು ಬೇಡಿಕೊಳ್ಳಬೇಕಾಗಿಲ್ಲ, ಪರಕೀಯರನ್ನು ದೇಶದಿಂದ ಹೊರಹಾಕಬೇಕು ಎಂಬ ಸುಭಾಷ್ ಚಂದ್ರ ಬೋಸ್ ಅವರ ಫೋಷಣೆ ಯುವಜನರಲ್ಲಿ ದೇಶಭಕ್ತಿಯ ಭಾವವನ್ನು ಮೂಡಿಸಿತು. ಅನೇಕ ಮಂದಿ ಬ್ರಿಟಿಷರ ವಿರುದ್ಧ ಸೆಟೆದು ನಿಲ್ಲುವಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಪ್ರೇರಣೆ ಗಮನಾರ್ಹವಾದದ್ದು ಎಂದು ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಲಾದ ವಸಂತ ಪಂಚಮಿ ಹಾಗೂ ಪರಾಕ್ರಮ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತನ್ನ ಹದಿನಾರು ವರ್ಷದ ವಯಸ್ಸಿನಲ್ಲಿ ರಾಮಕೃಷ್ಣ ಆಶ್ರಮ ಸೇರಬೇಕೆಂದು ಆಸೆಪಟ್ಟ ಸುಭಾಷ್ ಚಂದ್ರ ಬೋಸ್ ಅವರು, ತಂದೆಯ ಕನಸಿನಂತೆ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಇಂಗ್ಲೆಂಡಿನಲ್ಲಿ ಅಧ್ಯಯನ ಮುಗಿಸಿ ಭಾರತಕ್ಕೆ ಮರಳಿದರು. ಆದರೆ ಬ್ರಿಟಿಷರ ಸೇವೆಯನ್ನು ತಿರಸ್ಕರಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ಬೋಸರು ತಮ್ಮ ಗುರುಗಳಾದ ಚಿತ್ತರಂಜನ್ ದಾಸ್ ಅವರ ಪ್ರೇರಣೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ತೊಡಗಿ ನಂತರ ‘ಸ್ವರಾಜ್’ ಎಂಬ ದೇಶಭಕ್ತಿಯ ಪತ್ರಿಕೆಯನ್ನು ಆರಂಭಿಸಿದರು ಎಂದು ನುಡಿದರು. ವಸಂತಪಂಚಮಿ ಆಚರಣೆ ಬಗೆಗೆ ಮಾತನಾಡಿದ ಅವರು ಪ್ರಕೃತಿಯನ್ನು ಪ್ರೀತಿಸಿ ಆರಾಧಿಸುವ ಹಬ್ಬವೇ ವಸಂತ ಪಂಚಮಿ ಎಂದರು.
ಕಾರ್ಯಕ್ರಮದ ಅಂಗವಾಗಿ ಮೂರನೇ ತರಗತಿಯ ವಿದ್ಯಾರ್ಥಿಗಳಾದ ರಿಶಾನ್ ಸುರೇಶ್ ಸರಳಿಕಾನ, ಸಾನ್ವಿತ್, ಶ್ರಾವಣಿ ಎಂ, ನಾಲ್ಕನೇ ತರಗತಿಯ ವಿದ್ಯಾರ್ಥಿಗಳಾದ ಮೋಕ್ಷ್, ಅದ್ವಿತ್ ಸಾಲಿಯಾನ್, ಸುಭಾಷ್ ಚಂದ್ರ ಬೋಸರ ಕುರಿತು ಘೋಷವಾಕ್ಯಗಳನ್ನು ಹೇಳಿದರು. ಅಂತೆಯೇ ಎರಡನೇ ತರಗತಿಯ ವಿದ್ಯಾರ್ಥಿ ಸ್ವೋಜಸ್ ಸುಭಾಷ್ ಚಂದ್ರ ಬೋಸ್ ಅವರ ಕುರಿತು ಭಾಷಣ ಮಾಡಿದರು. ಮೂರನೇ ತರಗತಿಯ ವೇದ್ಯಾ ಸರಸ್ವತಿ ಭಟ್ ಅವರು ನೀರಾ ಆರ್ಯಾ ಅವರ ಕುರಿತು ಸಂಕ್ಷಿಪ್ತ ಪರಿಚಯವನ್ನು ನೀಡಿದರು. ವಸಂತ ಪಂಚಮಿಯ ಕುರಿತು ಕಿರು ನಾಟಕ ಹಾಗೂ ನೃತ್ಯವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ., ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.
ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಅಕ್ಷರಾ ಎಚ್.ಪಿ. ಪ್ರಾರ್ಥಿಸಿದರು. ಎರಡನೇ ತರಗತಿ ವಿದ್ಯಾರ್ಥಿಗಳಾದ ಅನ್ವಿತ ಎಚ್.ಪಿ., ಭುವಿ ಅವಿಷ್ಕ ಕೆ. ಹಾಗೂ ಮೂರನೇ ತರಗತಿ ವಿದ್ಯಾರ್ಥಿನಿ ಅಹನಾ ಎಲ್. ಕಾರ್ಯಕ್ರಮ ನಿರೂಪಿಸಿದರು. ನಾಲ್ಕನೇ ತರಗತಿ ವಿದ್ಯಾರ್ಥಿ ಅಮೋಘ್ ವೆಂಕಟರಾಜ ಪೆಲ್ತಾಜೆ ವಂದಿಸಿದರು.





















