ಪುತ್ತೂರು: ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ, ಪುತ್ತೂರು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಪುತ್ತೂರಿನ ಸಂಸಾರ (ಸಂಘಟನೆಗಾಗಿ ಸಾಮಾಜಿಕ ರಂಗಭೂಮಿ) ಕಲಾ ತಂಡದ ವತಿಯಿಂದ ನಡೆಯುತ್ತಿರುವ `ಆರೋಗ್ಯ ಜಾಗೃತಿ ಬೀದಿ ನಾಟಕ’ಕ್ಕೆ ಪುತ್ತೂರಿನ ಬಸ್ಸು ನಿಲ್ದಾಣದಲ್ಲಿ ಚಾಲನೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ತಮಟೆ ಬಡಿದು ಉದ್ಘಾಟಿಸಿ ಮಾತನಾಡುತ್ತಾ, ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಿಕೊಳ್ಳಬೇಕು. ಆರೋಗ್ಯ ಇಲಾಖೆಯ ವತಿಯಿಂದ ಮನೆ ಮನೆಗೆ ಆರೋಗ್ಯ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿದಾಗ ಉತ್ತಮ ರೀತಿಯಲ್ಲಿ ಸ್ಪಂಧನೆ ನೀಡಬೇಕು. ಇಲಾಖೆಯ ಸೇವಾ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಕೆಎಸ್ಸಾರ್ಟಿಸಿಯ ಡಿಪೋ ಮೆನೇಜರ್ ಸುಬ್ರಹ್ಮಣ್ಯ ಪ್ರಕಾಶ್ ಮಾತನಾಡಿ, ಆರೋಗ್ಯ ಅರಿವು ಪ್ರತಿಯೊಬ್ಬರಲ್ಲೂ ಇರಬೇಕಾಗಿದೆ. ಆರೋಗ್ಯ ಇಲಾಖೆಯ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಶ್ಮಿತಾ ಪ್ರಭು, ಕೆಎಸ್ಸಾರ್ಟಿಸಿ ಟಿಸಿ ಕೋಚಣ್ಣ ಪೂಜಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಹಿರಿಯ ಆರೋಗ್ಯ ಸಹಾಯಕಿ ಲಕ್ಷ್ಮೀ ಅವರು ಸ್ವಾಗತಿಸಿ, ವಂದಿಸಿದರು.
ಆಯಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಎಂಬ ಧ್ಯೇಯದಲ್ಲಿ ಎಲ್ಲೆಡೆಯೂ ಆರೋಗ್ಯ ಎಲ್ಲರಿಗೂ ಆರೋಗ್ಯ ಎಂಬ ಘೋಷವಾಕ್ಯದೊಂದಿಗೆ ಪುತ್ತೂರು ಮತ್ತು ಕಡಬ ತಾಲೂಕುಗಳ ಆಯ್ದ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಜಾಗೃತಿ ಬೀದಿ ನಾಟಕಗಳನ್ನು ಹಮ್ಮಿಕೊಳ್ಳಲಾಗಿದ್ದು, ಜ. 27ರಂದು ಪುತ್ತೂರು ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ, ಕಬಕ ಬಸ್ಸು ನಿಲ್ದಾಣ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ಹಾಗೂ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಬೀದಿ ನಾಟಕ ಪ್ರದರ್ಶನ ನೀಡಲಾಯಿತು. ಜ. 28ರಂದು ಸರ್ವೆ, ಸವಣೂರು ಮತ್ತು ಕಾಣಿಯೂರು, ಜ. 29ರಂದು ಕೊಯಿಲ, ಕಡಬ, ಶಿರಾಡಿ, ಜ. 30ರಂದು ಕುಂಬ್ರ, ಮಾಡ್ನೂರು ಮತ್ತು ಈಶ್ವರಮಂಗಲದಲ್ಲಿ ಪ್ರದರ್ಶನ ನೀಡಲಿದೆ.
ಆರೋಗ್ಯ ಇಲಾಖೆಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿರುವ ವಿವಿಧ ಯೋಜನೆಗಳು ಸೇರಿದಂತೆ ಸಾಂಕ್ರಾಮಿಕ ರೋಗ, ಆಸಾಂಕ್ರಾಮಿಕ ರೋಗ, ಮನೋರೋಗ, ಕ್ಷಯರೋಗ, ಅಪೌಷ್ಠಿಕತೆ, ಹೃದಯಜ್ಯೋತಿ, ಆಶಾಕಿರಣ, ತಾಯಿ ಮಕ್ಕಳ ಆರೋಗ್ಯ, ಮಧು ಮೇಹ, ರಕ್ತದೊತ್ತಡ, ಕ್ಯಾನ್ಸರ್ ಇನ್ನಿತರ ರೋಗಳ ಬಗ್ಗೆ ಹಾಗೂ ಅರೋಗ್ಯ ಇಲಾಖೆಯಿಂದ ರೋಗಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಹಾಡು, ನಾಟಕ, ಸಂವಾದಗಳ ಮೂಲಕ ಜಾಗೃತಿ ಮೂಡಿಸಲಾಯತು.
ಸಂಸಾರ ಪುತ್ತೂರು ಕಲಾ ತಂಡದ ಸಂಚಾಲಕ ಸಂಶುದ್ಧೀನ್ ಸಂಪ್ಯ, ನಿರ್ದೇಶಕ ಕೃಷ್ಣಪ್ಪ ಬಂಬಿಲ, ಸದಸ್ಯರಾದ ಭವಾನಿ ಕಾಂಚನ, ಲೋಕೇಶ್ ಬನ್ನೂರು, ಜಯಶ್ರೀ ಕಡಬ, ಮಿಥುನ್ ಕುಮಾರ್ ಸೋನಾ, ಅರ್ಪಿತಾ ಸುಳ್ಯ ಕಲಾವಿದರಾಗಿ ಭಾಗವಹಿಸಿದ್ದರು.





















