ಮಂಗಳೂರು: ಲವ್ ಸೆಕ್ಸ್ ದೋಖಾ ಪ್ರಕರಣದಲ್ಲಿ ಕೃಷ್ಣ ಜೆ. ರಾವ್ ಕುಟುಂಬ ಸಂಧಾನದ ಸೂಚನೆ ನೀಡಿರುವುದರಿಂದ ಕಲ್ಲಡ್ಕದಲ್ಲಿ ಆಯೋಜಿಸಿದ್ದ ನಾಮಕರಣ ಶಾಸ್ತ್ರ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಪ್ರತಿಭಾ ಕುಳಾಯಿ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯದ ಮಧು ಆಚಾರ್ಯ ಅವರು ಕರೆ ಮಾಡಿದ್ದರು. ಕೃಷ್ಣ ಜೆ. ರಾವ್ ಅವರ ಕುಟುಂಬದ ಜೊತೆ ಮಾತನಾಡುತ್ತಿದ್ದು, ಸ್ವಲ್ಪ ದಿನಗಳ ಕಾಲ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ತಡೆಯುವಂತೆ ತಿಳಿಸಿದ್ದಾರೆ. ಹಾಗೆಂದು ತುಂಬಾ ದಿನಗಳ ಕಾಲ ಕಾಯುವುದು ಸಾಧ್ಯವಿಲ್ಲ. ಮಾತ್ರವಲ್ಲ, ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ. ಈಗಾಗಲೇ ಹಮ್ಮಿಕೊಂಡಿರುವ ನಾಮಕರಣ ಶಾಸ್ತ್ರವನ್ನು ಫೆ. 7ರವರೆಗೆ ಮುಂದೂಡಲಾಗಿದೆ ಎಂದು ತಿಳಿಸಿದರು.
ಸಂಧಾನಕ್ಕೆ ಕೆ.ಪಿ. ನಂಜುಂಡಿ ಅವರಾಗಲಿ, ನಾನಾಗಲಿ ಬರಬಾರದು ಎಂಬ ಷರತ್ತನ್ನು ವಿಧಿಸಿದ್ದಾರೆ. ಆದರೆ ಇದಕ್ಕೆ ಹುಡುಗಿ ಮನೆಯವರು ಒಪ್ಪಿಕೊಂಡಿಲ್ಲ. ಇದರ ಮೇಲೆ ಸಾಕಷ್ಟು ಷರತ್ತುಗಳನ್ನು ವಿಧಿಸಿದ್ದಾರೆ. ಇದಾವುದಕ್ಕೂ ನಾವು ಒಪ್ಪುವುದಿಲ್ಲ. ನಾವು ಜನವರಿ ಕೊನೆವರೆಗೆ ಸಮಯ ನೀಡುತ್ತೇವೆ. ಆ ನಂತರ ಕಾಯುವುದಿಲ್ಲ ಎಂದು ಎಚ್ಚರಿಸಿದರು.
ಹುಡುಗಿಯ ಬಾಳ್ವೆ ದೃಷ್ಟಿಯಿಂದ ನಾನಾಗಲಿ, ನಂಜುಂಡಿ ಆಗಲಿ ಸಂಧಾನಕ್ಕೆ ಹೋಗುವುದಿಲ್ಲ. ಅವರ ಜೀವನ ಸರಿ ಆಗುವುದಾದರೆ ನಾವು ಹೋಗುವ ಅಗತ್ಯ ಇಲ್ಲ. ಎರಡೂ ಮನೆಯವರು ಪುತ್ತೂರು ಪೊಲೀಸ್ ಠಾಣೆ ಅಥವಾ ಮಂಗಳೂರು ಪೊಲೀಸ್ ಕಮೀಷನರ್ ಬಳಿ ಹೋಗಿ ಮದುವೆಗೆ ದಿನ ನಿಗದಿ ಮಾಡಲಿ ಎಂದರು.
























