ಪುತ್ತೂರು: ದೇವಾಲಯ ಸಂವರ್ಧನಾ ಸಮಿತಿ, ಪುತ್ತೂರು ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ವತಿಯಿಂದ ಮಕ್ಕಳ ಕಲರವ ಬೇಸಿಗೆ ಶಿಬಿರ ಪಾಂಗಳಾಯಿ ಅರಸು ಮುಂಡಿತ್ತಾಯ ದೈವಸ್ಥಾನ ಆವರಣದಲ್ಲಿ ಜರಗಿತು.

ಕಾರ್ಯಕ್ರಮ ಉದ್ಘಾಟಿಸಿದ ಗಣೇಶ್ ಭಟ್ ಕೇರ ಖಂಡಿಗ ಮಾತನಾಡಿ, ಮಕ್ಕಳು ತಮ್ಮ ಪೋಷಕರೊಂದಿಗೆ ಹಸಿದ ಬೀದಿ ನಾಯಿಗಳಿಗೆ ಹಾಗೂ ಇನ್ನಿತರ ಅಶಕ್ತ ಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ಒದಗಿಸಿ ಪ್ರಾಣಿ ದಯೆ ತೋರುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದೇವಾಲಯ ಸಂವರ್ಧನಾ ಸಮಿತಿಯ ಜಿಲ್ಲಾಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಧಾರ್ಮಿಕ ಶಿಕ್ಷಣ ತರಗತಿಗಳು ಪ್ರಾರಂಭವಾದ ಬಗೆ ಹಾಗೂ ಅದು ಈವರೆಗೆ ನಡೆದು ಬಂದ ದಾರಿಯನ್ನು ವಿವರಿಸಿ ಶಿಬಿರಾರ್ಥಿಗಳಿಗೆ ಶುಭ ಕೋರಿದರು.
ಪಾಂಗಳಾಯಿ ದೈವಸ್ಥಾನದ ಅಧ್ಯಕ್ಷ ಗೋಪಾಲ ನಾಯಕ್ ಶುಭ ಹಾರೈಸಿದರು. ಗಣೇಶ ಭಟ್ ಅವರ ಪತ್ನಿ ಪ್ರೀತಿ ಸುಧಾ, ನಗರಸಭೆ ಮಾಜಿ ಉಪಾಧ್ಯಕ್ಷ ವಿನಯ ಭಂಡಾರಿ, ದೈವಸ್ಥಾನದ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಉಪಸ್ಥಿತರಿದ್ದರು.
ಬೋಧಕರಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಡಾ. ವಿಜಯ ಸರಸ್ವತಿ, ಪ್ರಭಾವತಿ, ಸುಧಾ ಹೆಬ್ಬಾರ್, ಶಂಕರಿ ಶರ್ಮ ಹಾಗೂ ನಿರ್ವಾಹಕರಾಗಿ ಪ್ರತಿಮಾ ಸಂಪತ್, ರಶ್ಮಿ ಉಮಾನಾಥ್, ವಿನುತ, ಕ್ಷಮಾ ಸಂತೋಷ್ ಸಹಕರಿಸಿದರು.
ಮಾವಿನ ಎಲೆಯಿಂದ ವಿಶೇಷ ತೋರಣ, ಸರಳವಾಗಿ ಗಣಪತಿ ಪೂಜೆ, ದಿನನಿತ್ಯ ಪಠಿಸುವ ಶ್ಲೋಕಗಳು, ಆಟ ಇತ್ಯಾದಿಗಳನ್ನು ಶಿಬಿರದಲ್ಲಿ ಮಕ್ಕಳಿಗೆ ತಿಳಿಸಿಕೊಡಲಾಯಿತು. 185 ಮಕ್ಕಳು ಹಾಗೂ ಪೋಷಕರು ಶಿಬಿರದಲ್ಲಿ ಪಾಲ್ಗೊಂಡರು.
ಗರಿಮಾ ಮತ್ತು ತಂಡ ಪ್ರಾರ್ಥಿಸಿದರು. ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದೂ ಧಾರ್ಮಿಕ ಶಿಕ್ಷಣದ ಪುಸ್ತಕ ಸಮಿತಿಯ ನಿರ್ವಾಹಕಿ ಶಂಕರಿ ಶರ್ಮ ವಂದಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.
























