ದ್ವಾರಕಾ ಕಾರ್ಪೋರೇಶನ್ ಪ್ರೈ ಲಿ. ಇದರ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನ ಪುತ್ತೂರು ಮತ್ತು ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ ಹಾಗೂ ಐಕ್ಯೂಎಸಿ ವಿಭಾಗದ ಸಹಯೋಗದಲ್ಲಿ ಪುತ್ತೂರು ನಗರದ ನೆಲಪ್ಪಾಲ್ ಉದ್ಯಾನದಲ್ಲಿ ‘ಯಕ್ಷಗಾನ – ಹಾಡು ಹಬ್ಬ’ ಗಾನ ವೈಭವದ ಕಾರ್ಯಕ್ರಮ ನಡೆಯಿತು.
ವಿವೇಕಾನಂದ ಮಹಾವಿದ್ಯಾಲಯದ ಪ್ರಥಮ ಬ್ಯಾಚ್ ನ ವಿದ್ಯಾರ್ಥಿ ಹಾಗೂ ಪುತ್ತೂರು ಮೆಸ್ಕಾಂನ ವಿಶ್ರಾಂತ ಕಾರ್ಯನಿರ್ವಾಹಕ ಅಭಿಯಂತರರಾದ ಸದಾಶಿವ ಶರ್ಮ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿದ್ಯಾರ್ಥಿ ಜೀವನದಲ್ಲಿ ಕಲಾ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಉಚಿತವಾಗಿರುತ್ತದೆ ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸಂಚಾಲಕರಾದ ಮುರಳಿ ಕೃಷ್ಣ ಕೆ.ಎನ್, ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಶ್ರೀಪತಿ ಕಲ್ಲೂರಾಯ, ಪ್ರಾಂಶುಪಾಲರಾದ ಪ್ರೊ. ವಿ.ಜಿ. ಭಟ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮನಮೋಹನ ಎಂ, ಇಂಗ್ಲಿಷ್ ವಿಭಾಗದ ಪ್ರೊ. ಬಾಲಕೃಷ್ಣ ಹೊಸಮನೆ, ಸ್ನಾತಕೋತ್ತರ ವಿಭಾಗದ ಡಾ. ವಿಜಯ ಸರಸ್ವತಿ, ಯಕ್ಷ ರಂಜಿನಿ ಸಂಘದ ಸಂಯೋಜಕರಾದ ಪ್ರೊ. ಗೋವಿಂದರಾಜ್ ಶರ್ಮಾ, ದ್ವಾರಕಾ ಸಮೂಹ ಸಂಸ್ಥೆಗಳ ಮಾಲಕರಾದ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ, ನಿರ್ದೇಶಕರಾದ ಅಮೃತ ಅಮೃತಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ ಕುಂಬ್ಳೆ ನಿರ್ವಹಿಸಿದರು.
ಯಕ್ಷಗಾನ ಗಾನ ವೈಭವದಲ್ಲಿ ಭಾಗವತರಾಗಿ ವಿವೇಕಾನಂದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಶ್ರೇಯಾ ಆಚಾರ್ಯ, ಪ್ರಜ್ಞಾ ಪಿ.ಪಿ ಹಾಗೂ ಕೃತಿಕಾ ಯಕ್ಷಗಾನ ಹಾಡುಗಳನ್ನು ಪ್ರಸ್ತುತಪಡಿಸಿದರು.
ಚೆಂಡೆ-ಮದ್ದಳೆಯಲ್ಲಿ ಹಿಮ್ಮೇಳ ವಾದಕರಾದ ಮುರಳೀಧರ ಕಲ್ಲೂರಾಯ, ವಿದ್ಯಾರ್ಥಿಗಳಾದ ಯತೀನ್ ಕಂಟ್ರಮಜಲು, ಭವಿಷ್ ಹಾಗೂ ಆದಿತ್ಯ ಕೃಷ್ಣ ದ್ವಾರಕಾ ಸಹಕರಿಸಿದರು.
ಗಾನ ವೈಭವದ ನಿರೂಪಣೆಯನ್ನು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ನವೀನ ಕೃಷ್ಣ ಎಸ್ ಉಪ್ಪಿನಂಗಡಿ ನಡೆಸಿದರು.