ಪುತ್ತೂರು: ಇಲ್ಲಿನ ಮಾರ್ಕೆಟ್ ರಸ್ತೆಯ ಯೂನಿಯನ್ ಕಾಂಪ್ಲೆಕ್ಸ್’ನ ಮೊದಲ ಮಹಡಿಯಲ್ಲಿ ‘ರೂಟ್ ಕೆನಾಲ್’ ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ‘ಪ್ರಶಾಂತ ದಂತ ಚಿಕಿತ್ಸಾಲಯ’ ಗುರುವಾರ ಬೆಳಿಗ್ಗೆ ಶುಭಾರಂಭಗೊಂಡಿತು.
ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಉನ್ನತ ಶಿಕ್ಷಣ ಪಡೆದು ವಿದೇಶಗಳಿಗೆ ಹೋಗಿ, ಅಲ್ಲಿನ ಜನರ ಕೆಲಸ ಮಾಡುವುದಕ್ಕಿಂತ ನಮ್ಮೂರಿನಲ್ಲಿ ಸೇವೆ ನೀಡುವುದು ಉತ್ತಮವಾದ ಕೆಲಸ. ಡಾ. ಪ್ರಶಾಂತ್ ಅವರು ದಂತ ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉನ್ನತ ಶಿಕ್ಷಣ ಪಡೆದ ಬಳಿಕ ಅವರು ವಿದೇಶಗಳಿಗೆ ಹೋಗಬಹುದಿತ್ತು. ಆದರೆ ಅವರು ಹಾಗೆ ಮಾಡದೇ, ತನ್ನ ಹುಟ್ಟೂರಿಗೆ ಮರಳಿದ್ದಾರೆ. ಇಲ್ಲಿನ ಜನರ ಸೇವೆಗೆ ನಿಂತಿದ್ದಾರೆ. ಅವರ ಸೇವಾ ಮನೋಭಾವ ಶ್ಲಾಘನೀಯ. ಅಂಬಿಕ ಸಂಸ್ಥೆಯ ವಿದ್ಯಾರ್ಥಿಯಾಗಿರುವ ಡಾ. ಪ್ರಶಾಂತ್ ಅವರಿಗೆ ಹಾಗೂ ಅವರ ಸಂಸ್ಥೆಗೆ ಶುಭವನ್ನು ಹಾರೈಸುತ್ತಾ, ಇಲ್ಲಿನ ಜನರ ಬೆಂಬಲವೂ ಅವರಿಗೆ ಸಿಗಲಿ ಎಂದರು.

ಪ್ರಕಾಶ್ ದಂತ ಚಿಕಿತ್ಸಾಲಯದ ದಂತ ವೈದ್ಯ ಡಾ. ಶ್ರೀಪ್ರಕಾಶ್ ಬಿ. ಮಾತನಾಡಿ, ಸೌಜನ್ಯಯುತ ಮಾತು, ನಯ – ವಿನಯ ನಡವಳಿಕೆ ಡಾ. ಪ್ರಶಾಂತ್ ಅವರಲ್ಲಿದೆ. ಪ್ರಾರಂಭದ ದಿನಗಳಲ್ಲಿ ಪ್ರಕಾಶ್ ದಂತ ಚಿಕಿತ್ಸಾಲಯದಲ್ಲೂ ಕೆಲಸ ಮಾಡಿರುವ ಅವರು, ನಿಶ್ಚಿತ ಗುರಿಯನ್ನು ಇಟ್ಟುಕೊಂಡು ಸಾಧನೆಯತ್ತ ಸಾಗಿದ್ದಾರೆ. ಮಾನವೀಯತೆಯ ನೆಲೆಯಲ್ಲಿ ಜನರಿಗೆ ಸೇವೆಯನ್ನು ನೀಡಿ ಪ್ರೀತಿಗೆ, ಮೆಚ್ಚುಗೆಗೆ ಪಾತ್ರವಾಗುವಂತಾಗಲಿ. ನಗು ಮುಖದಿಂದಲೇ ಪ್ರತಿಯೊಬ್ಬರನ್ನು ಗುರುತಿಸಿ, ಚಿಕಿತ್ಸೆ ನೀಡುವ ಕಾರ್ಯವಾದಾಗ ಬಂದವರಲ್ಲಿ ಸಂತೃಪ್ತಿಯ ಭಾವ ಮೂಡುತ್ತದೆ ಎಂದರು.

ಹಿರಿಯ ವೈದ್ಯರಾದ ಜೆ. ಸಿ. ಅಡಿಗ, ಇಂಜಿನಿಯರ್ ಶಿವಪ್ರಸಾದ್ ತೆಂಕಬೈಲು, ರಾಮಕೃಷ್ಣ ಪ್ರೌಢ ಶಾಲೆಯ ಹೇಮನಾಥ ಶೆಟ್ಟಿ ಕಾವು, ಯೂನಿಯನ್ ಕ್ಲಬ್ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸಪ್ತ ವೆಂಚರ್ಸ್ ಪಾಲುದಾರರೂ ಡಾ. ಪ್ರಶಾಂತ್ ಅವರ ಹೆತ್ತವರೂ ಆದ ಶ್ಯಾಮ್ ಭಟ್ ಅಜಕ್ಕಳ, ಆಶಾ ಎಸ್. ಭಟ್ ಉಪಸ್ಥಿತರಿದ್ದರು.

ರೂಟ್ ಕೆನಾಲ್ ತಜ್ಞ ಡಾ. ಪ್ರಶಾಂತ ಶರ್ಮ ಅಜಕ್ಕಳ ಸ್ವಾಗತಿಸಿದರು. ಪಶುಪತಿ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ಲಭ್ಯವಿರುವ ಚಿಕಿತ್ಸಾ ಸೌಲಭ್ಯ:
ಬಾಯಿ ಹಾಗೂ ಹಲ್ಲಿಗಳ ತಪಾಸಣೆ, ಡಿಜಿಟಲ್ ಎಕ್ಸರೇ, ದಂತಕುಳಿ ತುಂಬಿಸುವುದು, ರೂಟ್ ಕೆನಾಲ್ / ಬೇರುನಾಳ ಚಿಕಿತ್ಸೆ, ಹಲ್ಲುಗಳನ್ನು ಕೀಳುವುದು, ಹಲ್ಲುಗಳನ್ನು ಸ್ವಚ್ಛಗೊಳಿಸುವುದು, ಮಕ್ಕಳ ಹಲ್ಲಿನ ಚಿಕಿತ್ಸೆ, ಹಲ್ಲಿನ ಕ್ಯಾಪ್, ಬ್ರಿಡ್ಜ್, ಸೆಟ್ ಹಾಗೂ ಇಂಪ್ಲಾಂಟ್, ವಕ್ರದಂತ ಚಿಕಿತ್ಸೆ, ಹಲ್ಲುಗಳ ಸೌಂದರ್ಯವರ್ಧಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದೆ. ವಾರದ ರಜೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ರೂಟ್ ಕೆನಾಲ್ ಚಿಕಿತ್ಸೆ ಲಭ್ಯವಿರುತ್ತದೆ.






















