ಪುತ್ತೂರು: ಪಾದಚಾರಿ ಮಹಿಳೆಯೋರ್ವರ ಮೇಲೆ ಬೀದಿನಾಯಿ ದಾಳಿ ನಡೆಸಿದ ಘಟನೆ ಪುತ್ತೂರಿನ ಪಡೀಲ್ – ರೈಲ್ವೇ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.
ಘಟನೆಯಿಂದ ಮಹಿಳೆ ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಇನ್ನೋರ್ವ ಮಹಿಳೆ ತಕ್ಷಣ ಆಗಮಿಸಿ ನಾಯಿಯನ್ನು ಗದರಿ, ಓಡಿಸಿದ್ದಾರೆ ಎನ್ನಲಾಗಿದೆ.
ಮಹಿಳೆ ಉಪನ್ಯಾಸಕಿಯಾಗಿದ್ದು ಮಂಗಳೂರು ಕಡೆಗೆ ರೈಲಿನಲ್ಲಿ ಪ್ರಯಾಣಿಸಲು ಪಡೀಲಿನಿಂದ ಕಾಲುನಡಿಗೆಯಲ್ಲಿ ರೈಲು ನಿಲ್ದಾಣಕ್ಕೆ ತೆರಳುತ್ತಿದ್ದರು. ರೈಲಿನಲ್ಲಿ ಪ್ರಯಾಣಿಸಲು ಲಗುಬಗೆಯಿಂದ ಹೋಗುತ್ತಿದ್ದ ಸಂದರ್ಭ ಹಿಂದಿನಿಂದ ಬಂದ ನಾಯಿ ದಾಳಿ ನಡೆಸಿದೆ. ಇದನ್ನು ಗಮನಿಸಿದ ಮತ್ತೋರ್ವ ಮಹಿಳೆ ಸಹಾಯಕ್ಕೆ ಆಗಮಿಸಿದ್ದಾರೆ. ಇದರಿಂದಾಗಿ ನಾಯಿ ದಾಳಿಯಿಂದ ಬಚಾವಾಗಿದ್ದಾರೆ.
ಪುತ್ತೂರು ನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಪಾದಚಾರಿಗಳಿಗೆ ತೊಂದರೆಯಾಗದಂತೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.























