ಪುತ್ತೂರು: ಗುರುವಾಯನಕೆರೆ ಭಾಗದಿಂದ ಹಲವಾರು ಮಂದಿ ಉದ್ಯೋಗಕ್ಕೆಂದು ಪುತ್ತೂರಿಗೆ ಆಗಮಿಸುತ್ತಿದ್ದು, ಸಂಜೆ ವೇಳೆ ಹಿಂದಿರುಗಲು ಬಸ್ ಸಮಸ್ಯೆ ಎದುರಾಗಿದೆ. ಆದ್ದರಿಂದ ಪುತ್ತೂರಿನಿಂದ 5.30ಕ್ಕೆ ಹೊರಡುವ ಧರ್ಮಸ್ಥಳ ಬಸ್ಸನ್ನು ಉಪ್ಪಿನಂಗಡಿವರೆಗೆ ನಾನ್ ಸ್ಟಾಪ್ ಮಾಡುವಂತೆ ಪುತ್ತೂರು ಕೆ.ಎಸ್.ಆರ್.ಟಿ.ಸಿ.ಗೆ ಗುರುವಾಯನಕೆರೆ ಭಾಗದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.
ಪುತ್ತೂರು ಕೆ.ಎಸ್.ಆರ್.ಟಿ.ಸಿ. ಡಿಟಿಓ ಅವರಿಗೆ ಮನವಿ ನೀಡಿ, ತಮಗಾಗುವ ಸಂಕಷ್ಟವನ್ನು ವಿವರಿಸಿದರು.
ಪುತ್ತೂರಿನಿಂದ 5.30ಕ್ಕೆ ಹೊರಡುವ ಧರ್ಮಸ್ಥಳ ಬಸ್, ಈಗ ಗುರುವಾಯನಕೆರೆ ತಲುಪುವಾಗ 7.05 ಹಾಗೂ ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ತಲುಪುವಾಗ 7.15 ಆಗುತ್ತದೆ. ಆ ಹೊತ್ತಿಗೆ ನಾರಾವಿ, ವೇಣೂರು ಹಾಗೂ ಕೊಲ್ಲಿ, ನಾವುರ, ಬಂಗಾಡಿ ಮೊದಲಾದ ಭಾಗಗಳ ಬಸ್ ತೆರಳಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಅದರಲ್ಲೂ ಮಹಿಳಾ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಪುತ್ತೂರು – ಉಪ್ಪಿನಂಗಡಿ ನಡುವೆ ಸಾಕಷ್ಟು ಬಸ್’ಗಳು ಇರುವುದರಿಂದ ಧರ್ಮಸ್ಥಳ ಬಸ್ಸನ್ನು ಈ ಮೊದಲಿದ್ದಂತೆ ಉಪ್ಪಿನಂಗಡಿವರೆಗೆ ಸ್ಟಾಪ್ ಕೊಡದೇ ಎಕ್ಸ್’ಪ್ರೆಸ್ ಆಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಕ್ರಿಯಿಸಿದ ಡಿಟಿಓ ಅವರು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ಈಗಾಗಲೇ ಪುತ್ತೂರು ಉಪ್ಪಿನಂಗಡಿ, ಬೆಳ್ತಂಗಡಿ ಮಾರ್ಗವಾಗಿ ಹೆಚ್ಚುವರಿ ಬಸ್ ಹಾಕಲಾಗಿದೆ. ಆದರೂ ಮನವಿ ನೀಡಿರುವ ಬಗ್ಗೆ ಪರಿಶೀಲನೆ ನಡೆಸಿ, ಮೂರು – ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಅಮಿತ್ ಶೆಟ್ಟಿ ಮದ್ದಡ್ಕ, ಹೇಮಂತ್ ವೇಣೂರ್, ವೆಂಕಟೇಶ್ ಆಚಾರ್ಯ, ರವಿ ಕಲ್ಲೇರಿ, ಉದಯ ಆಚಾರ್ಯ, ಪ್ರಶಾಂತ್ ಬೆಳ್ತಂಗಡಿ, ಸುಶಾಂತ್ ಗುರುವಾಯನಕೆರೆ, ಸುರೇಂದ್ರ ಪಣೆಜಾಲ್, ರಾಮ್ ಪ್ರಸಾದ್ ಪಣೆಜಾಲ್ ಮೊದಲಾದವರು ಉಪಸ್ಥಿತರಿದ್ದರು.






















