ಪುತ್ತೂರು: ಸಾರ್ವಜನಿಕ ಸರಕಾರಿ ಆಸ್ಪತ್ರೆ ಪುತ್ತೂರು ಇಲ್ಲಿನ ನೌಕರರಿಗೆ ಸಾರ್ವಜನಿಕರ ಬೈಗುಳ ಹೆಚ್ಚುತ್ತಿದ್ದು, ಶುಕ್ರವಾರ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ತುರ್ತು ಸಭೆ ನಡೆಸಿತು.
ಸಭೆಯ ಮಾಹಿತಿ ನೀಡಿದ ಸಮಿತಿಯ ಸುಧೇಶ್ ಶೆಟ್ಟಿ ಮಾತನಾಡಿ, ಪುತ್ತೂರು ಸರಕಾರಿ ಆಸ್ಪತ್ರೆಯ ನೌಕರರಿಗೆ ಸಾರ್ವಜನಿಕರು ಬೈಯುವ ಘಟನೆ ಹೆಚ್ಚುತ್ತಿದೆ. ಇಂತಹದ್ದೇ ಘಟನೆ ಗುರುವಾರವೂ ನಡೆದಿದ್ದು, ಸ್ಕ್ಯಾನಿಂಗ್ ವಿಭಾಗದ ಸಿಬ್ಬಂದಿಗಳಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ. ವಾಸ್ತವದಲ್ಲಿ, ಅಲ್ಲಿನ ಸಿಬ್ಬಂದಿಯೋರ್ವರು ಒಪ್ಪಿಗೆ ಪಡೆದುಕೊಂಡು ರಜೆಯಲ್ಲಿ ತೆರಳಿದ್ದು, ಇದನ್ನೇ ನೆಪವಾಗಿಟ್ಟುಕೊಂಡು ಇತರ ನೌಕರರಿಗೆ ಹೀನಾಯವಾಗಿ ಬೈದಿದ್ದಾರೆ. ಇಂತಹ ಘಟನೆ ಇದೀಗ ಹೆಚ್ಚುತ್ತಿದ್ದು, ಪೊಲೀಸ್ ದೂರು ನೀಡಲು ನಿರ್ಣಯಿಸಲಾಗಿದೆ ಎಂದರು.
ಪ್ರತಿದಿನ ಸಂಜೆ 4.30ರ ಹೊತ್ತಿಗೆ ಆಸ್ಪತ್ರೆಯ ಬಾಗಿಲು ಮುಚ್ಚಲಾಗುತ್ತದೆ. ಆದರೆ ಗುರುವಾರ ಆ ವ್ಯಕ್ತಿ ಆಗಮಿಸುವಾಗ ಸುಮಾರು 4.20 ಆಗಿತ್ತು. ಅಲ್ಲದೇ, ತುರ್ತು ಸ್ಕ್ಯಾನಿಂಗಿನ ಅವಶ್ಯಕತೆಯೂ ಇರಲಿಲ್ಲ. ಹಾಗಿದ್ದು, ಸಿಬ್ಬಂದಿಗಳಿಗೆ ಅನಾವಶ್ಯಕವಾಗಿ ಬೈದಿದ್ದಾರೆ. ಇದರಿಂದ ಸಿಬ್ಬಂದಿಗಳು ಮಾನಸಿಕವಾಗಿ ಕುಗ್ಗುತ್ತಿದ್ದು, ಸೇವೆಗೆ ತೊಂದರೆಯಾಗಲಿದೆ ಎಂದರು.
ಸೆಕ್ಯೂರಿಟಿ ಗಾರ್ಡ್:
ಆಸ್ಪತ್ರೆ ಆವರಣದಲ್ಲಿ ಸೆಕ್ಯೂರಿಟಿ ಗಾರ್ಡ್ ನಿಯೋಜಿಸುವ ಕುರಿತು ಆಲೋಚಿಸಲಾಗುತ್ತಿದೆ. ಹೋಂ ಗಾರ್ಡ್ ಒಬ್ಬರನ್ನು ನಿಯೋಜಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಇದರ ಜೊತೆಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿ, ಪಾಳಿಯಲ್ಲಿ ಪೊಲೀಸರನ್ನು ನಿಯೋಜಿಸುವ ಬಗ್ಗೆಯೂ ಮನವಿ ನೀಡಲಾಗುವುದು ಎಂದರು.
ಸಮಿತಿಯ ಆಸ್ಕರ್ ಆನಂದ್, ಮುಖೇಶ್ ಕೆಮ್ಮಿಂಜೆ, ಸಿದ್ದೀಕ್ ಸುಲ್ತಾನ್, ವಿಕ್ಟರ್ ಮಸ್ಕರೇನಸ್, ಅರುಣಾ ದಿನಕರ್ ರೈ, ವೈದ್ಯಾಧಿಕಾರಿ ಡಾ. ಆಶಾಜ್ಯೋತಿ, ಡಾ. ಅಜಯ್, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.