Gl harusha
ಸ್ಥಳೀಯ

ಪುತ್ತೂರು ದೇವಳ: 3ನೇ ಹಂತದ ತೆರವು ಕಾರ್ಯಾಚರಣೆ | ಉಳ್ಳಾಲ್ತಿ – ದಂಡನಾಯಕ ಕಿರುವಾಳು ಭಂಡಾರ ಆಗಮಿಸುವಾಗ ಎದುರಾಗುವ ಸ್ಥಳವಕಾಶದ ಕೊರತೆಗೆ ಪರಿಹಾರ!

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದಲ್ಲಿದ್ದ ಕಟ್ಟಡಗಳ 3ನೇ ಹಂತದ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದಲ್ಲಿದ್ದ ಕಟ್ಟಡಗಳ 3ನೇ ಹಂತದ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು.

Pashupathi
akshaya college

ದೇವಳದ ಪಶ್ಚಿಮ ದ್ವಾರದ ಬಳಿ ಇರುವ ಪ್ರಾಚೀನ ಅಂಗಡಿ ಕಟ್ಟಡವನ್ನು ಶನಿವಾರ ತೆರವು ಮಾಡಲಾಯಿತು. 

ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಈ ಕಟ್ಟಡವಿದ್ದು, ಇದರಲ್ಲಿ ವಿಠಲದಾಸ ಹೆಗ್ಡೆ ಅವರ ಜಿನಸು ಅಂಗಡಿ, ಮಧುರಾ ಸ್ವೀಟ್ಸ್ ಬೇಕರಿ ಮತ್ತು ಮಾಳಿಗೆಯಲ್ಲಿ  ನ್ಯಾಯವಾದಿ ಸುಬ್ರಹ್ಮಣ್ಯ ಕೊಳತ್ತಾಯರ ಕಚೇರಿ ಕಾರ್ಯನಿರ್ವಹಿಸುತ್ತಿತ್ತು.

ವಾರ್ಷಿಕ ಜಾತ್ರೋತ್ಸವ ಸಂದರ್ಭ ಉಳ್ಳಾಲ್ತಿ ದಂಡನಾಯಕ ಕಿರುವಾಳು ಭಂಡಾರ ಆಗಮಿಸುವಾಗ ಇಲ್ಲಿ ಜಾಗ ಇಕ್ಕಟ್ಟಾಗುತ್ತಿರುವ ಕಾರಣ ಹಳೆಯ ಕಟ್ಟಡ ತೆರವು ಮಾಡಿ ಸ್ಥಳಾವಕಾಶ ಸೃಷ್ಟಿ ಮಾಡುವ ಅನಿವಾರ್ಯತೆ ಇದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಕಟ್ಟಡದಲ್ಲಿರುವ ವರ್ತಕರಿಗೆ ತಿಳಿಸಿದ್ದು, ಅದರಂತೆ ಅವರೆಲ್ಲ ಬಿಟ್ಟು ಕೊಟ್ಟಿದ್ದಾರೆ.

ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಶೋಕ್ ರೈ ಮಾಧ್ಯಮಗಳ ಜತೆ ಮಾತನಾಡಿ, ವಾರ್ಷಿಕ ಜಾತ್ರೋತ್ಸವ ಸಂದರ್ಭ ಉಳ್ಳಾಳ್ತಿ- ದಂಡನಾಯಕ ಕಿರುವಾಳು ಭಂಡಾರ ದೇವಾಲಯದ ಪಶ್ಚಿಮ ದ್ವಾರದ ಮೂಲಕ ಬರುವಾಗ ಇಲ್ಲಿ ಸಾಕಷ್ಟು ಇಕ್ಕಟ್ಟಾಗುತ್ತಿದೆ. ಇದನ್ನು ವ್ಯಾಪಾರಸ್ಥರ ಗಮನಕ್ಕೆ ತಂದಿದ್ದೆವು. ಅವು ಒಪ್ಪಿಕೊಂಡು ಸ್ವ ಇಚ್ಛೆಯಿಂದ ಬಿಟ್ಟು ಕೊಟ್ಟಿದ್ದಾರೆ ಎಂದರು. ದೇವಸ್ಥಾನಕ್ಕೆ ಸೇರಿದ ಇನ್ನೂ 16.5 ಎಕರೆ ಜಾಗ ನಾನಾ ಕಡೆ ಬೇರೆಯವರ ಕೈಯ್ಯಲ್ಲಿದೆ. ಅದೆಲ್ಲವನ್ನೂ ತೆರವು ಮಾಡಲು ಸೂಚಿಸಿದ್ದೇವೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮಾದರಿಯಂತೆ ಪುತ್ತೂರಿನಲ್ಲೂ ಯಾತ್ರಿಕರಿಗೆ ಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದವರು ನುಡಿದರು.

ಕೊಠಡಿಗಳನ್ನು ಬಿಟ್ಟು ಕೊಟ್ಟವರಿಗೆ ಶ್ರೀದೇವರ ನಡೆಯಲ್ಲಿ ಪ್ರಸಾದ ನೀಡಿ ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ದಿನೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

3ನೇ ಕಾರ್ಯಾಚರಣೆ

ಮೊದಲ ಹಂತದ ಕಾರ್ಯಾಚರಣೆಯಲ್ಲಿ ದೇವಾಲಯದ ಹಿಂಭಾಗದಲ್ಲಿರುವ ಮನೆಗಳನ್ನು ತೆರವು ಮಾಡಲಾಗಿತ್ತು. 9 ಕುಟುಂಬಗಳು ವಾಸಿಸುತ್ತಿದ್ದು, ಬಹುಪಾಲು ಮಂದಿ ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟಿದ್ದರು. ಇಬ್ಬರು ಮಾತ್ರ ತಕರಾರು ಮುಂದಿಟ್ಟಿದ್ದರು. 2ನೇ ಹಂತದ ಕಾರ್ಯಾಚರಣೆಯಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡಲಾಗಿತ್ತು. ಮನೆಗಳು ಮತ್ತು ಅಂಗಡಿ ಕಟ್ಟಡಗಳ ತೆರವು ಮುಗಿದ ಬಳಿಕ ಖಾಲಿಯಾದ ಸುಮಾರು ಎರಡೂವರೆ ಎಕರೆ ಪ್ರದೇಶನವನ್ನು ಸಮತಟ್ಟು ಮಾಡಿ ತಂತಿ ಬೇಲಿ ಅಳವಡಿಸಲಾಗಿದೆ. ಪ್ರಸ್ತುತ ಈ ಜಾಗದಲ್ಲಿ ಜಾತ್ರೋತ್ಸವದ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗುತ್ತಿದ್ದು, ಚಪ್ಪರ ನಿರ್ಮಿಸಲಾಗುತ್ತಿದೆ. 3ನೇ ಹಂತದ ಕಾರ್ಯಾಚರಣೆ ಶನಿವಾರ ನಡೆದಿದ್ದು, ಕೆರೆಯ ಇನ್ನೊಂದು ಭಾಗದಲ್ಲಿ, ದ್ವಾರದ ಪಕ್ಕದಲ್ಲಿದ್ದ ಅಂಗಡಿ ಕಟ್ಟಡ ತೆರವಾಗಿದೆ. ಈ ನಡುವೆ, ಕೆಲ ದಿನಗಳ ಹಿಂದೆ ನಗರದ ಬಪ್ಪಳಿಗೆಯಲ್ಲಿರುವ ದೇವಸ್ಥಾನದ ಜಾಗದಲ್ಲಿದ್ದ ಮನೆಯನ್ನು ಕ್ರೈಸ್ತ ಕುಟುಂಬವೊಂದು ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟಿತ್ತು.

ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟಿದ್ದೇನೆ:

ನನ್ನ ತಂದೆಯವರು ದೇವಸ್ಥಾನಕ್ಕೆ ಸೇರಿದ ಈ ಜಾಗದ ಕಟ್ಟಡದಲ್ಲಿ 1948ರಿಂದ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದರು. 2012ರಲ್ಲಿ ಅವರು ನಿಧನರಾದ ಬಳಿಕ ನಾನು ಮುನ್ನಡೆಸಿಕೊಂಡು ಬಂದಿದ್ದೇನೆ. ಈಗ ದೇವಸ್ಥಾನದ ಅಭಿವೃದ್ಧಿಗಾಗಿ ಬಿಟ್ಟುಕೊಡಬೇಕು ಎಂದು ಕೇಳಿಕೊಂಡಾಗ ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟಿದ್ದೇವೆ. ದೇವಸ್ಥಾನದಿಂದ ಒಂದು ಪೈಸೆ ಹಣವನ್ನೂ ಪಡೆದುಕೊಂಡಿಲ್ಲ.

-ವಿಠಲದಾಸ ಹೆಗ್ಡೆ, ವ್ಯಾಪಾರಸ್ಥರು


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮುಕ್ವೆಯನ್ನು ಮುಳುಗಿಸಿದ ಮಳೆ ನೀರು | ಮನೆ, ಅಂಗಡಿಗಳನ್ನು ಮುಳುಗಿಸಿತು ಉಕ್ಕಿ ಹರಿದ ಚರಂಡಿ ನೀರು; ಹೆದ್ದಾರಿ ಬಂದ್!

ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ಹರಿದು ಮುಕ್ವೆ…