ಬೆಂಗಳೂರು: ಪುತ್ತೂರಿನ ಗಾನಸಿರಿ ಕಲಾ ಕೇಂದ್ರದ ರಜತ ವರ್ಷದ ಅಂಗವಾಗಿ ಆಯೋಜಿಸಿದ್ದ ‘ಗಾನಸಿರಿ ಗಾನ ನೃತ್ಯ ಸಮ್ಮಿಲನ’ ಸಮಾರಂಭದಲ್ಲಿ ಕಾರ್ಯಕ್ರಮ ನಿರೂಪಕ ಹಾಗೂ ಸಾಂಸ್ಕೃತಿಕ ಸಂಘಟಕ ಡಾ. ಕೆ. ಎನ್. ಅಡಿಗ ಅವರಿಗೆ ‘ಗಾನಸಿರಿ ಕರ್ನಾಟಕ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಈ ಅದ್ಧೂರಿ ಸಮಾರಂಭವು ಬೆಂಗಳೂರಿನ ‘ಡ್ಯಾನ್ಸ್ ಬೀಟ್ಸ್’ ನೃತ್ಯ ಸಂಸ್ಥೆಯ ಸಹಯೋಗದೊಂದಿಗೆ ಜರುಗಿತು.
ಡಾ. ಕೆ. ಎನ್. ಅಡಿಗ ಅವರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನನ್ಯ ಸೇವೆ, ಅವರ ಚತುರ ನಿರೂಪಣೆ ಹಾಗೂ ಸಂಘಟನಾ ಚಾತುರ್ಯವನ್ನು ಗುರುತಿಸಿ ಈ ಗೌರವವನ್ನು ನೀಡಲಾಯಿತು.
ಸಮಾರಂಭದಲ್ಲಿ ಸುಗಮ ಸಂಗೀತಜ್ಞೆ ಹಾಗೂ ಸಂಗೀತ ನಿರ್ದೇಶಕಿ ಡಾ. ಜಯಶ್ರೀ ಅರವಿಂದ್, ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಗಾನ ಸಿರಿ ಸಂಸ್ಥೆಯ ಕಿರಣ್ ಕುಮಾರ್
ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಾನ ಮತ್ತು ನೃತ್ಯಗಳ ಅಪೂರ್ವ ಸಮ್ಮಿಲನ ನಡೆಯಿತು.























