ಇರಾನ್–ಇಸ್ರೇಲ್–ಅಮೆರಿಕ ಯುದ್ಧದ ಪರಿಣಾಮವಾಗಿ ಮಧ್ಯಪ್ರಾಚ್ಯ ದೇಶಗಳಿಗೆ ಸಾಗಾಟ ಸ್ಥಗಿತಗೊಂಡಿದ್ದು, ಕರ್ನಾಟಕದ ಕೃಷಿ, ಹೈನೋದ್ಯಮ ಹಾಗೂ ಕುಕ್ಕುಟೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ವಿಮಾನ ಮತ್ತು ಹಡಗು ಮಾರ್ಗಗಳು ಸ್ಥಗಿತಗೊಂಡ ಕಾರಣ ಗಲ್ಫ್ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಮೊಟ್ಟೆ, ಹಾಲಿನ ಉತ್ಪನ್ನಗಳು ಹಾಗೂ ತಾಜಾ ತರಕಾರಿಗಳು ರಾಜ್ಯದಲ್ಲೇ ಉಳಿದಿವೆ.
ಸಾಮಾನ್ಯವಾಗಿ ದುಬೈ, ಮಸ್ಕತ್, ಕುವೈತ್, ಸೌದಿ ಅರೇಬಿಯಾ, ಕತಾರ್, ಬಹರೇನ್ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ಪ್ರತಿದಿನ ಕೋಟ್ಯಂತರ ರೂಪಾಯಿ ಮೌಲ್ಯದ ಉತ್ಪನ್ನಗಳು ರಫ್ತಾಗುತ್ತಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಿಂದ ವಾಣಿಜ್ಯ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ದಕ್ಷಿಣ ಭಾರತದಿಂದ ದಿನಕ್ಕೆ ಸುಮಾರು 80 ಲಕ್ಷ ಮೊಟ್ಟೆಗಳು ರಫ್ತಾಗುತ್ತಿದ್ದು, ಅದರಲ್ಲಿ ಕರ್ನಾಟಕದ ಪಾಲು 15–20 ಲಕ್ಷದಷ್ಟಿದೆ. ಫೆಬ್ರವರಿ 27 ನಂತರ ರಫ್ತು ನಿಂತಿದೆ. ಒಂದು ತಿಂಗಳು ಇದೇ ಸ್ಥಿತಿ ಮುಂದುವರಿದರೆ ಸುಮಾರು ₹200 ಕೋಟಿ ನಷ್ಟವಾಗಬಹುದು ಎಂದು National Egg Coordination Committee (ಎನ್ಇಸಿಸಿ) ಎಚ್ಚರಿಸಿದೆ.
ರಫ್ತು ನಿಂತ ಪರಿಣಾಮ ಸಗಟು ಮಾರುಕಟ್ಟೆಯಲ್ಲಿ 100 ಮೊಟ್ಟೆಗಳ ಬೆಲೆ ₹530ರಿಂದ ₹510ಕ್ಕೆ ಇಳಿಕೆಯಾಗಿದೆ. ಸ್ಥಳೀಯ ಬೇಡಿಕೆಯೂ ಕುಸಿದಿರುವುದರಿಂದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
























