ಪುತ್ತೂರು: ಗೆಜ್ಜೆಗಿರಿ ನಂದನ ಬಿತ್ತ್’ಲ್’ನಲ್ಲಿ ಸೋಮವಾರ ದೈವಗಳ ನೇಮೋತ್ಸವ ಜರಗಿತು.
ಕೋಟಿ – ಚೆನ್ನಯ, ದೇಯಿ ಬೈದ್ಯೆತಿ ಮೂಲ ಕ್ಷೇತ್ರವಾದ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮೂಡುಬಿದರೆ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.
ಸೋಮವಾರ ಬೆಳಿಗ್ಗೆ ಗಣಪತಿ ಹೋಮ, ಗುರುಪೂಜೆ, ದೈವಸಾನಿಧ್ಯದಲ್ಲಿ ಶುದ್ಧಿಕಲಶ ನಡೆದು ಧೂಮಾವತಿ ದೈವದ ನೇಮೋತ್ಸವ ಜರಗಿತು.
ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆದು ಸಂಜೆ ಧೂಮಾವತಿ ಬಲಿ ಉತ್ಸವ, ಮಹಾಪೂಜೆ ಜರಗಿತು.
ರಾತ್ರಿ ಕುಪ್ಪೆ ಪಂಜುರ್ಲಿ ದೈವದ ಭಂಡಾರ ಇಳಿದು, ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ ಬಳಿಕ ಕುಪ್ಪೆ ಪಂಜುರ್ಲಿ ನೇಮೋತ್ಸವ ಜರಗಿತು.
ಇದೇ ಸಂದರ್ಭ ಕಲ್ಲಲ್ತಾಯ ಹಾಗೂ ಕೊರತಿ ನೇಮೋತ್ಸವ ನಡೆಯಿತು.
ಇಂದು ಗರಡಿ ನೇಮ:
ಬುಧವಾರ ರಾತ್ರಿ 7ಕ್ಕೆ ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಟು, ದೇಯಿಬೈದೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ ನಡೆಯಲಿದೆ. ನಂತರ ದೇಯಿಬೈದೆತಿ ಪ್ರಸಾದ ವಿತರಣೆ, ದೇಯಿ ಬೈದೆತಿ ಸಮಾಧಿಯಲ್ಲಿ ದೀಪಾರಾಧನೆ, ಮೂಲಸ್ಥಾನ ಗರಡಿಯಲ್ಲಿ ಬೈದರ್ಕಳ ದರ್ಶನ ಸೇವೆ ಬೈದರ್ಕಳ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.