ಪುತ್ತೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 9ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ವೇದಿಕೆಯ ಉದ್ಘಾಟನೆ ಏ. 10ರಂದು ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಜಾತ್ರೋತ್ಸವದ ಅಂಗವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷಗಾನವನ್ನು ಪ್ರಸ್ತುತಪಡಿಸುತ್ತಿರುವುದು ಶ್ಲಾಘನೀಯ. ಯಕ್ಷಗಾನವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಜೊತೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಪಟ್ಲ ಫೌಂಡೇಶನ್ ಅನ್ನು ಹುಟ್ಟುಹಾಕಿ ಬಡ ಕಲಾವಿದರ ಕಣ್ಣೀರೊರೆಸುವ ಕೈಂಕರ್ಯವನ್ನು ಮಾಡುತ್ತಿರುವ ಸತೀಶ್ ಪಟ್ಲರವರು ಸಮಾಜದ ಆಸ್ತಿ ಎಂದ ಅವರು, ಅಭಿವೃದ್ಧಿ ನಿಟ್ಟಿನಲ್ಲಿ ಇಡೀ ರಾಜ್ಯವೇ ತಿರುಗಿ ನೋಡಬೇಕಾದ ರೀತಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಾಸಕ ಅಶೋಕ್ ಕುಮಾರ್ ರೈರವರ ನೇತೃತ್ವದಲ್ಲಿ ನಿರ್ಮಾಣಗೊಳ್ಳಲಿದೆ ಎಂದರು.
ಚಾರಿಟಿ ಮತ್ತು ಮನರಂಜನೆಯ ಉದ್ದೇಶ: ಪಟ್ಲ ಸತೀಶ್ ಶೆಟ್ಟಿ
ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಪಟ್ಲ ಫೌಂಡೇಶನ್ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶ ಚಾರಿಟಿ ಮತ್ತು ಮನರಂಜನೆ. ಕಳೆದ ಹತ್ತು ವರ್ಷಗಳಲ್ಲಿ ಯಕ್ಷಗಾನ ರಂಗದ ಅಶಕ್ತ ಕಲಾವಿದರಿಗೆ ನೆರವಿನ ಹಸ್ತ ಚಾಚಿದ್ದೇವೆ. ಆದರೆ ಅದಕ್ಕೆ ಎಲ್ಲರೂ ಕಾರಣೀಭೂತರಾಗಿದ್ದಾರೆ. ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ್ ರೈ ದೇರ್ಲವ ಅವರು ಉತ್ತಮ ರೀತಿಯಲ್ಲಿ ಸಂಘವನ್ನು ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸಂಘದ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ ಸಹಿತ ಇತರರು ಸಂಘದ ಬೆಳವಣಿಗೆಯಲ್ಲಿ ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.
ಅಶಕ್ತ ಕಲಾವಿದರ ಕುಟುಂಬಕ್ಕೆ ನೆರವು: ಸೀತಾರಾಮ ಶೆಟ್ಟಿ ಸವಣೂರು
ಅಧ್ಯಕ್ಷತೆ ವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಗೌರವಾಧ್ಯಕ್ಷ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಮಾತನಾಡಿ, ಪಟ್ಲ ಫೌಂಡೇಶನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಕಳೆದ ಒಂಭತ್ತು ವರ್ಷದಲ್ಲಿ ಅಶಕ್ತ ಕಲಾವಿದರ ನೆರವಿಗೆ ಇನ್ಸೂರೆನ್ಸ್ ವಿಮೆ ಸಹಿತ ಕೋಟಿಗಟ್ಟಲೇ ಹಣ ಪಟ್ಲ ಫೌಂಡೇಶನ್ ವಿನಿಯೋಗಿಸಿದ್ದು ಆ ಮೂಲಕ ಅಶಕ್ತ ಕಲಾವಿದರ ಕುಟುಂಬವನ್ನು ಮೇಲಕ್ಕೆತ್ತುವ ಕೆಲಸದೊಂದಿಗೆ ಉಪಕಾರ ಸ್ಮರಣೆ ಪಟ್ಲ ಫೌಂಡೇಶನ್ ಮಾಡುತ್ತಿರುವುದು ಮೆಚ್ಚಬೇಕಾದ್ದು. ಜೊತೆಗೆ ಅಶಕ್ತ ಕಲಾವಿದರಿಗೆ ಉಡುಪಿಯಲ್ಲಿ ಸುಮಾರು ಐದು ಎಕ್ರೆ ಜಾಗದಲ್ಲಿ ಮನೆ ನಿರ್ಮಾಣ ಮಾಡುವುದಕ್ಕೆ ನಮ್ಮ ಬೆಂಬಲ ಸದಾ ಇರಲಿದೆ ಎಂದರು.
ಅಭಿನಂದನೆ
ಕಾರ್ಯಕ್ರಮದ ಯಶಸ್ವಿಯಲ್ಲಿ ಸಹಕರಿಸಿದ ಪುತ್ತೂರು ತಾಲೂಕು ಘಟಕದ ಪದಾಧಿಕಾರಿಗಳಾದ ಉಪಾಧ್ಯಕ್ಷರಾದ ನುಳಿಯಾಲು ರವೀಂದ್ರ ಶೆಟ್ಟಿ, ಹರಿಣಾಕ್ಷಿ ಜೆ.ಶೆಟ್ಟಿ, ಪ್ರಧಾನ ಸಂಚಾಲಕ ಪ್ರಶಾಂತ್ ರೈ ಮುಂಡಾಳಗುತ್ತು, ಕೋಶಾಧಿಕಾರಿ ಪ್ರೊ|ದತ್ತಾತ್ರೇಯ ರಾವ್, ಸದಸ್ಯರುಗಳಾದ ಎಂ.ಜಿ ರೈ, ಎಂ.ಆರ್ ಜಯಕುಮಾರ್ ರೈ ಮಿತ್ರಂಪಾಡಿ, ಡಾ.ರಾಜೇಶ್ ಬೆಜ್ಜಂಗಳ, ಗಣೇಶ್ ರೈ ಡಿಂಬ್ರಿ, ಶಾರದಾ ಅರಸ್, ಸುಮಂಗಲಾ ಶೆಣೈ, ಚಂದ್ರಹಾಸ ರೈ ತುಂಬೆಕೋಡಿ, ಎ.ಜೆ ರೈ, ಮಿತ್ರಂಪಾಡಿ ಪುರಂದರ ರೈ, ಇಳಂತಾಜೆ ಸಂತೋಷ್ ರೈ, ರವೀಂದ್ರನಾಥ ರೈ ಬಳ್ಳಮಜಲು, ಹಿರಿಯ ಯಕ್ಷಗಾನ ಕಲಾವಿದ ದಾಸಪ್ಪ ರೈ, ಕಲಾವತಿ ಟೀಚರ್ ಸುಳ್ಯ ಅವರಿಗೆ ಹೂ ನೀಡಿ ಅಭಿನಂದಿಸಲಾಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ್ ರೈ ದೇರ್ಲ, ಪುತ್ತೂರು ಎಸ್ಆರ್ಕೆ ಲ್ಯಾಡರ್ಸ್ ಮಾಲಕ ಕೇಶವ ಆಮೈ ಉಪಸ್ಥಿತರಿದ್ದರು.
ಘಟಕದ ಪ್ರದಾನ ಸಂಚಾಲಕ ಪ್ರಶಾಂತ್ ರೈ ಮುಂಡಾಲಗುತ್ತು ಪಟ್ಲ ಫೌಂಡೇಶನ್ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಕದ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ ಸ್ವಾಗತಿಸಿ, ಸಮಿತಿ ಸದಸ್ಯ ಹಾಗೂ ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಡಾ.ರಾಜೇಶ್ ಬೆಜ್ಜಂಗಳ ವಂದಿಸಿದರು. ಸಮಿತಿ ಸದಸ್ಯ ಉದಯ ವೆಂಕಟೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಹಸ್ರ ಕವಚ ಮೋಕ್ಷ ಪೌರಾಣಿಕ ಯಕ್ಷಗಾನ
ದೇವಸ್ಥಾನದ ಸಾಂಸ್ಕೃತಿಕ ಕಲಾ ವೇದಿಕೆಯಲ್ಲಿ ಸತೀಶ್ ಶೆಟ್ಟಿ ಪಟ್ಲ ಇವರ ನೇತೃತ್ವದಲ್ಲಿ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಅವರಿಂದ ಜನಪ್ರಿಯ ಕನ್ನಡ ಪ್ರಸಂಗ `ಸಹಸ್ರ ಕವಚ ಮೋಕ್ಷ’ ಪೌರಾಣಿಕ ಪುಣ್ಯ ಕಥಾಭಾಗ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಮುರಳಿ ಶಾಸ್ತ್ರಿ ತೆಂಕಬೈಲು, ಭರತ್ ಶೆಟ್ಟಿ ಸಿದ್ಧಕಟ್ಟೆ, ಸಂಗೀತದಲ್ಲಿ ಪೂರ್ಣೇಶ್ ಆಚಾರ್ಯ, ಚೆಂಡೆ-ಮದ್ದಳೆಯಲ್ಲಿ ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು, ಕೌಶಿಕ್ ರಾವ್ ಪುತ್ತಿಗೆ, ಮುಮ್ಮೇಳದಲ್ಲಿ ಸ್ತ್ರೀಪಾತ್ರಧಾರಿಗಳಾಗಿ ರಮೇಶ್ ಭಟ್ ಬಾಯಾರು, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು, ಮಹೇಶ್ ಎಡನೀರು, ವಿಧೂಷಕರಾಗಿ ಹಾಸ್ಯರತ್ನ ಬಾಲಕೃಷ್ಣ ಮಣಿಯಾಣಿ ಮೆವ್ವಾರು, ಹಾಸ್ಯಪಟು ಸಂದೇಶ್ ಮಂದಾರ, ಪ್ರಧಾನ ಪಾತ್ರಧಾರಿಗಳಾಗಿ ಬಿ.ರಾಧಾಕೃಷ್ಣ ನಾವಡ ಮಧೂರು, ರಾಕೇಶ್ ರೈ ಅಡ್ಕ, ಸಚಿನ್ ಅಮೀನ್ ಉದ್ಯಾವರ, ಪ್ರಕಾಶ್ ಸಾಗರ, ಲಕ್ಷ್ಮಣ್ ಪೆರ್ಮುದೆ, ಸುಬ್ರಾಯ ಹೊಳ್ಳ ಕಾಸರಗೋಡು, ಡಿ.ಮಾಧವ ಬಂಗೇರ ಕೋಳ್ತಮಜಲ್, ಲೋಕೇಶ್ ಮುಚ್ಚೂರು, ದಿವಾಕರ ಕಾಣಿಯೂರು, ಭುವನ್ ರಾಜ್, ದಿವಾಣ ಶಿವಶಂಕರ್ ಭಟ್, ಮೋಹನ್ ಬೆಳ್ಳಿಪ್ಪಾಡಿ, ರಂಜಿತ್ ಮಲ್ಲ, ಮಧುರಾಜ್ ಪೆರ್ಮುದೆ, ಮನ್ವಿತ್ ನಿಡ್ಡೋಡಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಮನೀಶ್ ಪಾಟಾಳಿ ಎಡನೀರು, ರಮೇಶ್ ಪಟ್ರಮೆ, ಸುಹಾಸ್ ಪಂಜಿಕಲ್ಲು, ವಿಶ್ವಾಸ್ ಬಜಗೋಳಿ ಸಹಕರಿಸಿದರು.






















