ಪುತ್ತೂರು: ತೆಂಕಿಲ ಗೌಡ ಸಮುದಾಯ ಭವನದ ಮುಂಭಾಗದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ನೂತನ ಶಿಲಾಮಯ ದೇವರ ಕಟ್ಟೆ ಸಿದ್ಧಗೊಂಡಿದೆ. ಏ. 12ರಂದು ಬೆಳಿಗ್ಗೆ ಸಮರ್ಪಣಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ದೇವರ ಕಟ್ಟೆಯಲ್ಲಿ ಪೂಜೆ ಸ್ವೀಕರಿಸಲಿದ್ದಾರೆ.
2007ರಲ್ಲಿ ಗೌಡ ಸಮುದಾಯ ಭವನ ಲೋಕಾರ್ಪಣೆಗೊಂಡಿತ್ತು. 2021ರಲ್ಲಿ ದೇವರ ಪ್ರೇರಣೆಯೋ ಎಂಬಂತೆ ಮರದ ಪೀಠದಲ್ಲಿ ದೇವರಿಗೆ ಕಟ್ಟೆಪೂಜೆ ನೆರವೇರಿಸಲು ಶುರು ಮಾಡಲಾಯಿತು. ಇದೀಗ ಹಲವರ ಒತ್ತಾಸೆಯಂತೆ ನೂತನ ಶಿಲಾಮಯ ಕಟ್ಟೆ ನಿರ್ಮಾಣಗೊಂಡಿದೆ. ಈ ಬಾರಿ ಶ್ರೀ ಮಹಾಲಿಂಗೇಶ್ವರ ದೇವರು ಗೌಡ ಸಮುದಾಯ ಭವನದ ನೂತನ ಶಿಲಾಮಯ ಕಟ್ಟೆಯಲ್ಲಿ ಪೂಜೆ ಸ್ವೀಕರಿಸಲಿದ್ದಾರೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ನೂತನ ಕಟ್ಟೆಯ ದೇವರಿಗೆ ಸಮರ್ಪಣೆಯಾಗಲಿದೆ. ಬೆಳಿಗ್ಗೆ 9 ಗಂಟೆಗೆ ಗಣಪತಿ ಹವನ ನಡೆದು, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಕಟ್ಟೆ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸ್ವಾಮೀಜಿಯವರು ಗೌರವಿಸಲಿದ್ದಾರೆ.
ರಾತ್ರಿ 8 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ರಾತ್ರಿ ಸುಮಾರು 11.30ರ ಹೊತ್ತಿಗೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಪೂಜೆ ನೆರವೇರಲಿದೆ.
ಹಲವರ ಕನಸು ನನಸಾಗಿದೆ:
ಸುಮಾರು 12 ಲಕ್ಷ ರೂಪಾಯಿಯಲ್ಲಿ ನೂತನ ಶಿಲಾಮಯ ಕಟ್ಟೆಯನ್ನು ನಿರ್ಮಿಸಲಾಗಿದೆ. ನೂತನ ಕಟ್ಟೆ ನಿರ್ಮಾಣ ಮಾಡಬೇಕೆಂಬ ಹಲವರ ಕನಸು ಇದೀಗ ನನಸಾಗಿದೆ. ಆಡಳಿತ ಮಂಡಳಿ ಹಾಗೂ ಸಮಾಜದ ಎಲ್ಲರ ಸಹಕಾರದಿಂದ ಸುಂದರವಾದ ಕಟ್ಟೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಸುಂದರ ಗೌಡ ನಡುಬೈಲು, ಅಧ್ಯಕ್ಷರು, ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಪುತ್ತೂರು






















