ಬೆಳ್ತಂಗಡಿ: ಮಹಾಶಿವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಪಾದಯಾತ್ರಿಗಳಿಗೆ ಚಾರ್ಮಾಡಿ ಭಾಗದಲ್ಲಿ ಸಮಗ್ರ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಚಾರ್ಮಾಡಿ ಘಾಟಿ ಸೇರಿದಂತೆ ಚಾರ್ಮಾಡಿ, ಮುಂಡಾಜೆ, ಕಲ್ಮಂಜ ಪ್ರದೇಶಗಳಲ್ಲಿ ಪಾದಯಾತ್ರೆ ತಂಡಗಳಿಗೆ ಅನ್ನದಾಸೋಹ, ಅಡುಗೆ ಹಾಗೂ ವಿಶ್ರಾಂತಿ ವ್ಯವಸ್ಥೆ ಮಾಡಲಾಗಿದೆ. ರಸ್ತೆಯುದ್ದಕ್ಕೂ ಕಸದ ಬುಟ್ಟಿಗಳು ಮತ್ತು ಗೋಣಿ ಚೀಲಗಳನ್ನು ಇರಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
ಅಗತ್ಯ ಸೇವೆಗೆ ತಂಡಗಳು ಸಜ್ಜು
ಅರಣ್ಯ ಇಲಾಖೆ ಬೆಂಕಿ ಅನಾಹುತ ತಪ್ಪಿಸಲು ಅಗ್ನಿರೇಖೆ ನಿರ್ಮಿಸಿದ್ದು, ಸಿಬ್ಬಂದಿಯನ್ನು ನಿಯೋಜಿಸಿದೆ. ಪಂಚಾಯಿತಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದಿಂದ ಕಸ ಸಂಗ್ರಹ ವ್ಯವಸ್ಥೆ ಮಾಡಲಾಗಿದೆ.
SDM ಆಸ್ಪತ್ರೆ ಉಜಿರೆ ವತಿಯಿಂದ ಚಾರ್ಮಾಡಿ, ಮುಂಡಾಜೆ, ಉಜಿರೆ ಹಾಗೂ ಧರ್ಮಸ್ಥಳ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಕೌಂಟರ್ಗಳನ್ನು ತೆರೆಯಲಾಗಿದ್ದು, ತುರ್ತು ಪರಿಸ್ಥಿತಿಗೆ ಆಂಬ್ಯುಲೆನ್ಸ್ ಸಿದ್ಧವಾಗಿವೆ.ಭಕ್ತರು ಭಜನೆ, ಶಿವ ಪಂಚಾಕ್ಷರಿ ಜಪದಲ್ಲಿ ತೊಡಗಿಸಿಕೊಂಡು ಪಾದಯಾತ್ರೆ ಮುಂದುವರಿಸುತ್ತಿದ್ದು, ಭಾನುವಾರದ ಮಹಾಶಿವರಾತ್ರಿ ಆಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.
























