ಪುತ್ತೂರು: ಬೊಳುವಾರು ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷ ಕಲಾ ಪ್ರತಿಷ್ಠಾನದ ವಾರ್ಷಿಕೋತ್ಸವದ ಅಂಗವಾಗಿ ಜ.10ರಂದು ಬೊಳುವಾರಿನ ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಸಹಪರಿವಾರ ಕ್ಷೇತ್ರದಲ್ಲಿ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಮತ್ತು ಹಿರಿಯ ಯಕ್ಷಗಾನ ಕಲಾವಿದರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ ಗಂಟೆ 5.15ರಿಂದ ಕಲ್ಲಾರೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಉಪ್ಪಿನಂಗಡಿ ಶಾಖೆಯ ವಿದ್ಯಾರ್ಥಿಗಳಿಂದ ಗಾನಗಾಯನ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 6.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಬೊಳುವಾರು ಶ್ರೀ ದುರ್ಗಾ ಉಳ್ಳಾಳ್ತಿ ಸಪರಿವಾರ ಕ್ಷೇತ್ರದ ಉಪಾಧ್ಯಕ್ಷ ಗೋಪಾಲಕೃಷ್ಣ ಹೇರಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಅರ್ಥದಾರಿಗಳು ಮತ್ತು ಪ್ರತಿಷ್ಠಾನದ ಮಾರ್ಗದರ್ಶಕರೂ ಆಗಿರುವ ಗುಂಡ್ಯಡ್ಕ ಈಶ್ವರ ಭಟ್ ಅವರನ್ನು ಗೌರವಿಸಲಾಗುವುದು. ರಾತ್ರಿ ಗಂಟೆ 7.30ಕ್ಕೆ ಕ್ಷೇತ್ರದ ದೇವಿಗೆ ದುರ್ಗಾಪೂಜೆ ನಡೆಯಲಿದೆ. ಬಳಿಕ ರಾತ್ರಿ ಗಂಟೆ 8ಕ್ಕೆ ಪ್ರತಿಷ್ಡಾನದ ವಿದ್ಯಾರ್ಥಿಗಳಿಂದ “ನರಕಾಸುರ ಮೋಕ್ಷ ಹಾಗು ಶ್ರೀ ಕೃಷ್ಣ ಪಾರಿಜಾತ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದವರು ಹೇಳಿದರು.
ಪ್ರತಿ ತಿಂಗಳು ತಾಳಮದ್ದಳೆ:
2011ರಿಂದ ಮಕ್ಕಳಿಗೆ ತರಬೇತಿ ನೀಡುತ್ತಿದ್ದೆ. 2016ರಿಂದ ನಮ್ಮ ದೇವಸ್ಥಾನದಲ್ಲಿ ಜೊತೆಯಾಗಿ ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನವನ್ನು ಪ್ರಾರಂಭ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಚೆಂಡೆ, ಮದ್ದಳೆ, ಭಾಗವತಿಕೆ, ನೃತ್ಯ ತರಬೇತಿಯನ್ನು ಕೊಡುತ್ತಾ ಬರುತ್ತಿದ್ದು, ಯಕ್ಷಗಾನವನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆಯ ಕೆಲಸ ಮಾಡುತ್ತಾ ಬರುತ್ತಿದೆ. ನಾಟ್ಯ ತರಗತಿಯನ್ನು ಪ್ರತಿಷ್ಠಾನದಿಂದ ಉಚಿತವಾಗಿ ಮಾಡುತ್ತಿದ್ದೇವೆ. ಸುಮಾರು 50 ಮಕ್ಕಳು ಈಗ ಶಿಕ್ಷಣ ಕಲಿಯುತ್ತಿದ್ದಾರೆ ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ನಾಯಕ್ ಪಾಲೆಚ್ಚಾರು ಅವರು ತಿಳಿಸಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಶಂಕರ್ ಭಟ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಬಲ್ಲಾಳ್, ಪ್ರತಿಷ್ಠಾನದ ಸದಸ್ಯ ಅನಂತ ನಾರಾಯಣ ಉಪಸ್ಥಿತರಿದ್ದರು.






















