ಪುತ್ತೂರು: ತಾಲೂಕಿನ ಕಾರಣಿಕ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಪೂರ್ವಭಾವಿಯಾಗಿ ನಡೆಯಲಿರುವ ಒಂದು ಮಂಡಲ ರಂಗಪೂಜೆ ನವಂಬರ್ 8ರಂದು ಸಂಜೆ ಆರಂಭಗೊಳ್ಳಲಿದೆ.
ಒಂದು ಮಂಡಲ ಅಂದರೆ 48 ದಿನಗಳ ಪರ್ಯಂತ ರಂಗಪೂಜೆ ನಡೆದು, ಕೊನೆ ದಿನ ಅಂದರೆ ಡಿ. 25ರಂದು ದೊಡ್ಡ ರಂಗಪೂಜೆಯೊಂದಿಗೆ ಸಮಾಪನಗೊಳ್ಳಲಿದೆ. ಬಳಿಕ ಕಿರುಷಷ್ಠಿ ಜಾತ್ರೆ ನಡೆಯಲಿದೆ. ಕಳೆದ ಕೆಲ ವರ್ಷಗಳಿಂದ ಒಂದು ಮಂಡಲ ರಂಗಪೂಜೆ ನಡೆದುಬರುತ್ತಿದ್ದು, ಊರ ಹೊರ ಊರಿನ ಭಕ್ತರನ್ನು ಸೆಳೆಯುತ್ತಿದೆ. ಅವರ ಮನಸಂಕಲ್ಪಗಳನ್ನು ಈಡೇರಿಸುತ್ತಿವೆ. ಭಕ್ತರ ಸಂಕಷ್ಟಗಳನ್ನು ದೂರ ಮಾಡುತ್ತಿವೆ. ಆದ್ದರಿಂದ ಸುಬ್ರಹ್ಮಣ್ಯ ದೇವರ ನಡೆಯಲ್ಲಿ ನಡೆಯುವ ರಂಗಪೂಜೆ ವರ್ಷದಿಂದ ವರ್ಷಕ್ಕೆ ಕಳೆಗಟ್ಟುತ್ತಿದೆ.
ರಂಗಪೂಜೆ ಪ್ರತಿದಿನ ಸಂಜೆ 6.30ಕ್ಕೆ ಆರಂಭಗೊಳ್ಳುತ್ತದೆ. ದಿನಕ್ಕೆ ಸುಮಾರು 14 ಮಂದಿ ಸೇವಾದಾರರಿಗೆ ರಂಗಪೂಜೆ ನಡೆಸಲು ಅವಕಾಶವಿದೆ. ದೇವರಿಗೆ ರಂಗಪೂಜೆ ನೆರವೇರಿದ ಬಳಿಕ, ರಾತ್ರಿ ಅನ್ನಸಂತರ್ಪಣೆ ಜರಗಲಿದೆ. ರಂಗಪೂಜೆಯ ಜೊತೆಗೆ ಕಾರ್ತಿಕ ಪೂಜೆ, ಸರ್ವಸೇವೆ ನಡೆಯುತ್ತವೆ.
ರಂಗಪೂಜೆ ಸೇವೆ ಸಲ್ಲಿಸುವ ಭಕ್ತಾದಿಗಳು ಒಂದು ದಿನ ಮುಂಚಿತವಾಗಿ ತಿಳಿಸಬೇಕು. ರಂಗಪೂಜೆ ಸೇವೆ, ಒಂದು ದಿನದ ಮಹಾ ಅನ್ನದಾನ ಸೇವೆ, ಒಂದು ದಿನದ ಅನ್ನದಾನ ಸೇವೆ ಸಲ್ಲಿಸಲು ಭಕ್ತಾದಿಗಳಿಗೆ ಅವಕಾಶವಿದೆ. ಸೇವೆ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 9606515600 ಸಂಪರ್ಕಿಸುವಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೈಲುಗುತ್ತು ಸದಾನಂದ ಶೆಟ್ಟಿ ಕೂರೇಲು ಹಾಗೂ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























