ಪುತ್ತೂರು: 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ನೇತ್ರಾವತಿ ವಲಯ, ಪುತ್ತೂರು ತಾಲೂಕಿನ ಆಶ್ರಯದಲ್ಲಿ ಶನಿವಾರ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಘೋಷವಾಕ್ಯದೊಂದಿಗೆ ಯೋಗ ಸಂಭ್ರಮ ಜರಗಿತು.

ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೇವಸ್ಥಾನದ ಅಧ್ಯಕ್ಷ ಕೇಶವ ಬೆದ್ರಾಳ, ಯೋಗದ ಪ್ರಯೋಜನವನ್ನು ತಿಳಿ ಹೇಳಿದರು. ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಸನದಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿದಂತಾಗಿದೆ ಎಂದರು.
ಪುತ್ತೂರು ತಾಲೂಕು ಸಂಚಾಲಕ ಕೃಷ್ಣಾನಂದ, ಕಾರ್ಯಕ್ರಮದ ಸಂಚಾಲಕ ಹೇಮಚಂದ್ರ, ಸಹಸಂಚಾಲಕ ಜ್ಞಾನೇಶ ವಿಶ್ವಕರ್ಮ, ತಾಲೂಕು ಶಿಕ್ಷಣ ವಿಧಿ ಪ್ರಮುಖರಾದ ಸತೀಶ ಸುವರ್ಣ, ಸುಜಾತ, ಶುಭ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮೊದಲು ಭಜನೆ, ಶನಿವಾರದ ಪ್ರಯುಕ್ತ ವಿಶೇಷ ಹನುಮಾನ್ ಚಾಲೀಸ್ ಪಠಣ, ಅಮೃತ ವಚನ, ಪಂಚಾಂಗ ಪಠಣ ನಡೆಯಿತು. ಭಜನೆಯನ್ನು ಹಾಗೂ ಹನುಮಾನ್ ಚಾಲೀಸ್ ಅನ್ನು ಸತೀಶ್ ಹಾಗೂ ತಂಡ ನೆರವೇರಿಸಿದರು. ಅಮೃತ ವಚನವನ್ನು ಕಂಬಳ ಬೆಟ್ಟು ಶಾಖೆಯ ಯಶೋಧ, ಪಂಚಾಂಗವನ್ನು ಶ್ರೀ ಮಹಾಲಿಂಗೇಶ್ವರ ಶಾಖೆಯ ಅರುಣ ಪಠಿಸಿದರು.
ಕಾರ್ಯಕ್ರಮದ ಮೊದಲನೇ ಅವಧಿಯಲ್ಲಿ ಮಾನಸಿಕ ಸಿದ್ಧತೆ, ಉಸಿರಾಟ ಪ್ರಕ್ರಿಯೆ, ಗಣಪತಿ ನಮಸ್ಕಾರ, ಷಣ್ಮುಖ ನಮಸ್ಕಾರ ಹಾಗೂ ವಿಷ್ಣು ನಮಸ್ಕಾರವನ್ನು ಆರ್ಯಾಪು ಶಾಖೆಯ ಚಂದ್ರನಾಥ ನೆರವೇರಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಶಿಕ್ಷಕರಾದ ಆರ್ಯಾಪು ಶಾಖೆಯ ಪುಷ್ಪಲತಾ, ಆರ್ಯಾಪು ಶಾಖೆಯ ದೀಪಕ್ ಸಹಕರಿಸಿದರು.
ಎರಡನೇ ಅವಧಿಯಲ್ಲಿ ಆಯುಷ್ ಪಠ್ಯಕ್ರಮ ಆಧಾರಿತ ಯೋಗಾಭ್ಯಾಸ, ಅಮೃತಾಸನ ಹಾಗೂ ಪ್ರಾಣಾಯಾಮ – ಧ್ಯಾನವನ್ನು ಸಂಪ್ಯ ಶಾಖೆಯ ಶಿಕ್ಷಕಿ ಲಕ್ಷ್ಮೀ ನೆರವೇರಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಶಿಕ್ಷಕರಾದ ಆರ್ಯಾಪು ಶಾಖೆಯ ವಿನಯ, ಆರ್ಯಾಪು ಶಾಖೆಯ ಸತೀಶ್, ಸುಭದ್ರ ಶಾಖೆಯ ಅಶೋಕ್, ಪಾಂಗಳಾಯಿ ಶಾಖೆಯ ಸತೀಶ್, ಸಂಪ್ಯ ಶಾಖೆಯ ಸುಮ ಸಹಕರಿಸಿದರು.
ಬಳಿಕ ಚಿತ್ರಾನ್ನ, ಕ್ಷೀರ, ಪಾನಕವನ್ನೊಳಗೊಂಡ ಪ್ರಸಾದವನ್ನು ಅನ್ನಪೂರ್ಣೇಶ್ವರಿ ಮಂತ್ರದೊಂದಿಗೆ ಸ್ವೀಕರಿಸಲಾಯಿತು.
ಅಗ್ನಿಹೋತ್ರವನ್ನು ಸಂಪ್ಯ ಶಾಖೆಯ ಸೂರಪ್ಪ ದಂಪತಿ ನೆರವೇರಿಸಿದರು. ಯೋಗ ದಿನಾಚರಣೆ ಥೀಮ್ನ ಹೂವಿನ ರಂಗೋಲಿಯನ್ನು ಸುಭದ್ರ ಶಾಖೆಯ ದಿನೇಶ ವಿಶ್ವಕರ್ಮ ನೇತೃತ್ವದಲ್ಲಿ ರಚಿಸಲಾಯಿತು.
ಹೇಮಚಂದ್ರ ಕಲ್ಲೇಗ ವಂದಿಸಿದರು. ಆರ್ಯಾಪು ಶ್ರೀಚಕ್ರರಾಜರಾಜೇಶ್ವರೀ ಶಾಖೆಯ ಶುಭ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರು ತಾಲೂಕು ವ್ಯಾಪ್ತಿಗೆ ಒಳಪಟ್ಟ ಸುಮಾರು 600 ಮಿಕ್ಕಿ ಯೋಗಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.