ಬೆಂಗಳೂರಿನ ಚೆನ್ನೈಸ್ ಅಮಿರ್ತಾ ಇನ್’ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್’ಮೆಂಟ್ ವಿದ್ಯಾರ್ಥಿಗಳು ಹೊಸ ದಾಖಲೆ ನಿರ್ಮಿಸಿದ್ದಾರೆ. ಕೇವಲ 19 ನಿಮಿಷ 17 ಸೆಕೆಂಡ್’ನಲ್ಲಿ ಒಟ್ಟು 55 ಕಲ್ಲಂಗಡಿ ಹಣ್ಣುಗಳಲ್ಲಿ ರಾಷ್ಟ್ರಗೀತೆಯನ್ನು ಕೆತ್ತಿದ್ದಾರೆ.
ಭಾನುವಾರ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಚೆನ್ನೈಸ್ ಅಮಿರ್ತಾ ಇನ್’ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್’ಮೆಂಟ್ ಈ ದಾಖಲೆಗೆ ಸಾಕ್ಷಿಯಾಯಿತು.
ರಾಷ್ಟ್ರಗೀತೆಯ ಸಾಲುಗಳನ್ನು ಕೆತ್ತಲು ಒಟ್ಟು 55 ಕಲ್ಲಂಗಡಿ ಹಣ್ಣುಗಳನ್ನು ಬಳಸಿಕೊಳ್ಳಲಾಯಿತು. ಜನಗಣ ಮನ ಅಧಿನಾಯಕ ಜಯ ಹೇ…. ಎಂದು ಸಾಗುವ ಸಾಲುಗಳನ್ನು ಕಲ್ಲಂಗಡಿ ಹಣ್ಣಿನ ಮೇಲೆ ಆಕರ್ಷಕವಾಗಿ ಕೆತ್ತುವ ಚಮತ್ಕಾರವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಸದಸ್ಯರೂ, ಕರ್ನಾಟಕ ಲೋಕಾಯುಕ್ತದ ನಿವೃತ್ತ ವಿಜಿಲೆನ್ಸ್ ನಿರ್ದೇಶಕರೂ ಆಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಶ್ರೀ ಡಿ.ಎನ್. ಮುನಿಕೃಷ್ಣ ಹಾಗೂ ಐ.ಬಿ.ಆರ್.ನ ಅಡ್ಜುಡಿಕೇಟರ್ ಶ್ರೀ ಹರೀಶ್ ಆರ್. ಮುಖ್ಯ ಅತಿಥಿಯಾಗಿದ್ದು, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಆರ್. ಭೂಮಿನಾಥನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.