ಪುತ್ತೂರು: ಪುತ್ತೂರು ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ವ್ಯವಹಾರ ನಿರ್ವಹಣಾ ವಿಭಾಗವು ನ್ಯೂ ಏಜ್ ಇನ್ಕ್ಯೂಬೇಶನ್ ನೆಟ್ವರ್ಕ್ (NAIN), ಸ್ಟಾರ್ಟ್ಅಪ್ ಕರ್ನಾಟಕ – ಕರ್ನಾಟಕ ಸರ್ಕಾರದ ಮುಂದಾಳತ್ವದ ಸಹಯೋಗದಲ್ಲಿ ‘ಸ್ಟಾರ್ಟ್ಅಪ್ ಸ್ಪಿಯರ್’ ಉದ್ಯಮಶೀಲತಾ ಸಮಾವೇಶವನ್ನು ಜ. 27ರಂದು ಪಿಜಿ ಸೆಮಿನಾರ್ ಹಾಲ್ನಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂಟೇರೋ ಮಾತನಾಡಿ, ಆರಾಮ ವಲಯದಿಂದ ಹೊರಬಂದು ತಮ್ಮ ವ್ಯವಹಾರ ಕಲ್ಪನೆಗಳ ಮೇಲೆ ಶ್ರಮಿಸುವಂತೆ ಕರೆ ನೀಡಿದರು. ಉದ್ಯಮಶೀಲ ಮನೋಭಾವವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾರ್ದಿಕ್ ಹರ್ಬಲ್ಸ್, ಪುತ್ತೂರು ಸಂಸ್ಥೆಯ ಸಿಇಒ ಹಾಗೂ ಉದ್ಯಮಿ ಮುರಳಿಧರ್ ಕೆ., ಇಂದಿನ ತೀವ್ರ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನದ ಯಶಸ್ಸಿಗೆ ಪರಿಣಾಮಕಾರಿ ಮಾರುಕಟ್ಟೆ ತಂತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ನಂತರ ನಡೆದ ಪ್ಯಾನೆಲ್ ಚರ್ಚೆಯಲ್ಲಿ ವಿವಿಧ ಕ್ಷೇತ್ರಗಳ ಉದ್ಯಮ ತಜ್ಞರು ತಮ್ಮ ಅನುಭವಾಧಾರಿತ ವಿಚಾರಗಳನ್ನು ಹಂಚಿಕೊಂಡರು.
ಪುತ್ತೂರು ಆಕರ್ಷಣ್ ಇಂಡಸ್ಟ್ರೀಸ್ ಮಾಲೀಕ ಮೊಹಮ್ಮದ್ ಸಾಧಿಕ್ ಅವರು ನಾವೀನ್ಯತೆ ಹಾಗೂ ಇನ್ನೂ ಪರಿಹಾರ ಕಾಣದ ಸಮಸ್ಯೆಗಳಿಗೆ ಉತ್ಪನ್ನ ಅಭಿವೃದ್ಧಿಯ ಮೂಲಕ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ವಿವರಿಸಿದರು.
ಪುತ್ತೂರು ಕೋಸ್ಟಲ್ ಕೊಕೊನಟ್ ಇಂಡಸ್ಟ್ರೀಸ್’ನ ಡೆನ್ನಿಸ್ ಮಸ್ಕರೆನ್ಹಾಸ್ ಅವರು ಉದ್ಯೋಗಿಗಳ ತೃಪ್ತಿ ಹಾಗೂ ಸಕಾರಾತ್ಮಕ, ಉತ್ಪಾದಕ ಕಾರ್ಯವಾತಾವರಣವು ದೀರ್ಘಕಾಲೀನ ವ್ಯವಹಾರ ಬೆಳವಣಿಗೆಗೆ ಮುಖ್ಯ ಅಂಶಗಳೆಂದು ಒತ್ತಿ ಹೇಳಿದರು.
ಅಮೃತಾ ಸ್ಟೋರ್ಸ್, ಪುತ್ತೂರು ಸಂಸ್ಥೆಯ ಮಾಲೀಕ ಉಮೇಶ್ ಕೆ. ಅವರು ಯಶಸ್ವಿ ಉದ್ಯಮಿಯಾಗಲು ಅಗತ್ಯವಿರುವ ದೃಢ ಸಂಕಲ್ಪ ಮತ್ತು ಮನೋಬಲದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸದಿಂದ ಉದ್ಯಮಶೀಲತೆಯತ್ತ ಹೆಜ್ಜೆ ಇಡುವಂತೆ ಪ್ರೇರೇಪಿಸಿದರು.
ವ್ಯವಹಾರ ನಿರ್ವಹಣಾ ವಿಭಾಗದ ಡೀನ್ ಹಾಗೂ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ವಿ. ಸ್ವಾಗತಿಸಿದರು. ಬಿಬಿಎ ವಿದ್ಯಾರ್ಥಿನಿ ಮೋನಿಷಾ ಮತ್ತು ತಂಡ ಪ್ರಾರ್ಥಸಿದರು. ಆತಿಥೇಯ ಸಂಸ್ಥೆಯ ಡಿಐಎ ನೈನ್ (DIA–NAIN) ಪ್ರತಿನಿಧಿ ಅಭಿಷೇಕ್ ಸುವರ್ಣ ವಂದಿಸಿದರು.





















