ಪುತ್ತೂರು: ಭಾನುವಾರ ಸಂಜೆ 5.45ಕ್ಕೆ ಸರಿಯಾಗಿ ಆಳ್ವಾಸ್ ಸಾಂಸ್ಕೃತಿಕ ವೈಭವ ಶುರುವಾಗಲಿದೆ. ಈ ಸಂದರ್ಭ ಸಮಯಕ್ಕೆ ಸರಿಯಾಗಿ ಬರಬೇಕು ಎಂದು ಡಾ. ಮೋಹನ್ ಆಳ್ವ ಅವರು ಶಾಸಕ ಅಶೋಕ್ ಕುಮಾರ್ ರೈ ಅವರಲ್ಲಿ ಕೇಳಿಕೊಂಡರು.
ಪುತ್ತೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಡಾ. ಮೋಹನ್ ಆಳ್ವ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರು ವೇದಿಕೆ ಹಂಚಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಅಶೋಕ್ ರೈ ಆಗಮನ ತಡವಾಗಿತ್ತು. ಈ ಹಿನ್ನೆಲೆಯಲ್ಲಿ ವೇದಿಕೆಯಲ್ಲಿ ಮಾತನಾಡುತ್ತಾ ಮೋಹನ್ ಆಳ್ವ, ವಿನಂತಿಸಿಕೊಂಡರು.
ಡಾ. ಮೋಹನ್ ಆಳ್ವ ಅವರು ಸಮಯ ಪಾಲನೆಗೆ ಹೆಚ್ಚಿನ ಒತ್ತು ನೀಡುವವರು. ಆಳ್ವಾಸ್ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ಶುರುವಾಗುತ್ತವೆ. ಈ ಹಿನ್ನೆಲೆಯಲ್ಲಿ ಪುತ್ತೂರಿನ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಆಗಮಿಸುವಂತೆ ವಿನಂತಿಸಿದರು.
ತಮ್ಮ ಮಾತಿನ ಸಂದರ್ಭ ಇದಕ್ಕೆ ಉತ್ತರಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, ನೀವು ಒಮ್ಮೆ ಚುನಾವಣೆಗೆ ನಿಲ್ಲಿರೆಂದು ತಮಾಷೆಗೈದರು.
ದಿನನಿತ್ಯ ನೂರಾರು ಜನರು ಎಲ್ಲೆಂಲ್ಲಿಂದಲೋ ಬರುತ್ತಿರುತ್ತಾರೆ. ಅವರ ಅಹವಾಲು ಸ್ವೀಕರಿಸದೇ ಹೋದರೆ, ಎಲ್ಲಿ ನ್ಯಾಯ ಕೊಡಲು ಅಸಮರ್ಥನಾಗುತ್ತೇನೋ ಎಂಬ ಭಯ ಕಾಡುತ್ತದೆ. ಹಾಗಾಗಿ ಬೇಗ ಬರಬೇಕು ಅಂದುಕೊಂಡರೂ ಸಮಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಆದರೆ ಸಂಜೆ ನಡೆಯುವ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಆಗಮಿಸುತ್ತೇನೆ ಎಂದು ಭರವಸೆ ನೀಡಿದರು.

























