ಪುತ್ತೂರು: ಕಬಕ ಸರಕಾರಿ ಪ್ರೌಢಶಾಲಾ ಶಿಕ್ಷಕಿ ಡಾ.ಶಾಂತಾ ಪುತ್ತೂರು ಅವರಿಗೆ ಆಕ್ಸಿಸ್ ಮ್ಯಾಕ್ಸ್ ಇನ್ಸೂರೆನ್ಸ್ ಶಿಕ್ಷಾರತ್ನ 2025 ಪ್ರಶಸ್ತಿಯನ್ನು ಅತ್ತಾವರದ ಸಂಸ್ಥೆಯ ಕಚೇರಿಯಲ್ಲಿ ಪ್ರಧಾನ ಮಾಡಲಾಯಿತು.
ಕಳೆದ ಮೂವತ್ತು ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶಾಂತಾ ಪುತ್ತೂರು ಅವರು, ಸ್ನಾತಕೋತ್ತರ ಪದವೀಧರರಾಗಿದ್ದು, ಯೋಗದಲ್ಲಿ ಡಿಪ್ಲೋಮ, ನಲಿಕಲಿ, ಯೋಗ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಗೈಡ್ಸ್ ಶಿಕ್ಷಕಿಯೂ ಆಗಿರುವ ಇವರು, ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿ ಯಾಗಿದ್ದಾರೆ. ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಧರ್ಮ ಸ್ಥಳದ ಬಂಟ್ವಾಳ ತಾಲೂಕು ಯೋಗಸಂಘಟಕಿಯಾಗಿ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕಾಸರಗೋಡು ಇದರ ಕರ್ನಾಟಕ ರಾಜ್ಯ ಸಂಚಾಲಕಿಯಾಗಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷರಾಗಿದ್ದಾರೆ.
ಇವರ ಕವನ ಸಂಕಲನ ಸೌರಭ ಬಿಡುಗಡೆಗೊಂಡಿದ್ದು, ಅನೇಕ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದಾರೆ. ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ಕವನ ಪ್ರಸಾರವಾಗಿದೆ. ಇವರ ಕವನ, ಲೇಖನ, ವ್ಯಕ್ತಿಚಿತ್ರ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಸಾಧನೆ ಗುರುತಿಸಿ ಆಕ್ಸಿಸ್ ಮ್ಯಾಕ್ಸ್ ಇನ್ಸೂರೆನ್ಸ್ ಶಿಕ್ಷಾರತ್ನ 2025 ಪ್ರಶಸ್ತಿ ನೀಡಿ ಗೌರವಿಸಿದೆ.
ಟ್ರ್ಯೈ ನಿಂಗ್ ಮ್ಯಾನೇಜರ್ ಸಚಿನ್ ಕೆ.ಎಸ್., ಮ್ಯಾನೇಜರ್ಸ್ ರಿತೇಶ್ ಶೆಟ್ಟಿ, ಆಶ್ರೀತ್ ಎನ್., ನಿದೀಶಾ ಉಪಸ್ಥಿತರಿದ್ದರು.
ಇವರೊಂದಿಗೆ ಕವಿ, ಸಂಘಟಕ, ಶಿಕ್ಷಕ, ಪತ್ರಕರ್ತ ಜಯಾನಂದ ಪೆರಾಜೆ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿ ದೇವಕಿ ಅವರನ್ನು ಗೌರವಿಸಲಾಯಿತು.