ಪುತ್ತೂರು: ಜಿಲ್ಲೆಯ ಎರಡನೇ ಅತಿದೊಡ್ಡ ವಾಣಿಜ್ಯ ನಗರ ಪುತ್ತೂರು. ಬ್ರ್ಯಾಂಡ್ ಮಂಗಳೂರಿನಂತೆ ಬ್ರ್ಯಾಂಡ್ ಪುತ್ತೂರು ಪರಿಕಲ್ಪನೆಯನ್ನು ಮುಂದಿಡಲಾಗಿದೆ. ಇದರ ಸಾಕಾರಕ್ಕೆ ಪತ್ರಕರ್ತರ ಕೊಡುಗೆ ಅತೀಅಗತ್ಯ ಎಂದು ಪುತ್ತೂರು ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪುತ್ತೂರು ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರ್ಯಾಂಡ್ ಮಂಗಳೂರು ಕಾರ್ಯರೂಪಕ್ಕೆ ಬರುವಲ್ಲಿ ಜಿಲ್ಲೆಯ ಪತ್ರಕರ್ತರ ಕೊಡುಗೆ ಸಾಕಷ್ಟಿದೆ ಎಂದು ನೆನಪಿಸಿಕೊಂಡ ಅವರು, ಪುತ್ತೂರು ನಗರದ ಆಡಳಿತ ಸುಧಾರಣೆ ಮಾಡುವಲ್ಲಿ ಪತ್ರಕರ್ತರು ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಬರುವ ಟೀಕೆ, ವಿಮರ್ಶೆ, ಸಮಸ್ಯೆ ಬಿಂಬಿತ ಸುದ್ದಿಗಳನ್ನು ನಾವು ಧನಾತ್ಮಕವಾಗಿ ಸ್ವೀಕರಿಸಿಕೊಂಡು ಸಾಕಷ್ಟು ಬದಲಾವಣೆ ತಂದಿದ್ದೇವೆ ಎಂದವರು ನುಡಿದರು.
ಲೇಖನ ಬಹಳ ಹರಿತವಾದುದು. ಅದು ಬಹುದೊಡ್ಡ ಕ್ರಾಂತಿ ಮಾಡಬಲ್ಲುದು. ಆರಂಭದ ಕಾಲಘಟ್ಟದಲ್ಲಿ ಪತ್ರಿಕೆಗಳು ದೇಶದ ಸ್ವಾತಂತ್ರಕ್ಕಾಗಿ ಕೆಲಸ ಮಾಡಿದವು. ಸ್ವಾತಂತ್ರಾನಂತರದಲ್ಲಿ ಮಾಧ್ಯಮಗಳು ದೇಶ ಸುಧಾರಣೆಗಾಗಿ ಕೆಲಸ ಮಾಡುತ್ತಿವೆ. ಇವತ್ತಿನ ಡಿಜಿಟಲ್ ಯುಗದಲ್ಲಿ ಮಾಧ್ಯಮ ಮಾಹಿತಿ ಸಾಕಷ್ಟು ವೇಗವಾಗಿದೆ. ಅದರ ಜತೆಗೆ ಸುಳ್ಳು ಸುದ್ದಿಗಳ ವಿಜ್ರಂಬಣೆಯೂ ಆಗುತ್ತಿದೆ. ಈ ವಿಚಾರದಲ್ಲಿ ಕಾರ್ಯನಿರತ ಪತ್ರಕರ್ತರು ಎಚ್ಚರ ವಹಿಸುವ ಅಗತ್ಯವಿದೆ ಎಂದವರು ನುಡಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಾದ ಪುಣ್ಯಶ್ರೀ, ಸಿಹಾ ಸಮ್ರಾ ಮತ್ತು ಕೃತಿ ಕೆ. ಅವರನ್ನು ಸಂಘದ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು, ಪತ್ರಿಕೆ ಮತ್ತು ಸಾಹಿತ್ಯ ಬೇರೆಯಲ್ಲ. ಅಭಿವ್ಯಕ್ತಿಯ ವಿಧಾನ ಮಾತ್ರ ಬೇರೆ ಇರಬಹುದು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮವು ಇತರ 3 ಅಂಗಗಳು ತಪ್ಪಿದಾಗ ತಿದ್ದುವ ಮಹೋನ್ನತ ಕೆಲಸ ಮಾಡುತ್ತದೆ. ಅವುಗಳನ್ನು ಅಲುಗಾಡಿಸುವ ಶಕ್ತಿಯೂ ಮಾಧ್ಯಮಕ್ಕಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಜಿಲ್ಲಾ ಸಂಘದಿದದ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗುವುದು. ಇದು ಎಲ್ಲ ತಾಲೂಕು ಮಟ್ಟದಲ್ಲೂ ನಡೆಯಲಿದೆ ಎಂದರು.
ಜಿಲ್ಲಾ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಶುಭ ಕೋರಿದರು. ಪುತ್ತೂರು ಸಂಘದ ಅಧ್ಯಕ್ಷ ಸಿದ್ದಿಕ್ ನೀರಾಜೆ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಸದಸ್ಯ ಮೇಘಾ ಪಾಲೆತ್ತಡಿ ಸ್ವಾಗತಿಸಿ, ಸದಸ್ಯ ಸುಧಾಕರ ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ವಂದಿಸಿದರು.
ನಾ ಕಾರಂತ ಪೆರಾಜೆ, ನಝೀರ್ ಕೊಯಿಲ, ಐ.ಬಿ. ಸಂದೀಪ್ ಕುಮಾರ್, ಅಜಿತ್ ಉಚ್ಚಿಲ, ಪ್ರವೀಣ್ ಬೊಳುವಾರ್, ಹರೀಶ್, ಯತೀಶ್ ಉಪ್ಪಳಿಗೆ, ರಾಜೇಶ್ ಪಟ್ಟೆ, ಶರತ್, ವಿದ್ಯಾಶ್ರೀ ಅತಿಥಿಗಳಿಗೆ ಹೂ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.
ಬಿ.ಟಿ. ರಂಜನ್ ಸಂಸ್ಮರಣೆ
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ, ಸುದೀರ್ಘ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ದಿ. ಬಿ.ಟಿ. ರಂಜನ್ ಅವರ ಸ್ಮರಣೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ಸಾರಥ್ಯದಲ್ಲಿ ಮುಂದಿನ ದಿನಗಳಲ್ಲಿ ಸಂಸ್ಮರಣಾ ಕಾರ್ಯಕ್ರಮ ನಡೆಸುವ ಬಗ್ಗೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಕಟಿಸಲಾಯಿತು. ಹಿರಿಯ ಸದಸ್ಯ ಸುಧಾಕರ ಸುವರ್ಣ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿ, ಬಿ.ಟಿ. ರಂಜನ್ ಹೆಸರಿನಲ್ಲಿ ಸಂಸ್ಮರಣೆ ಕಾರ್ಯಕ್ರಮ ಅಥವಾ ದತ್ತಿನಿಧಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಮ್ಮ ಭಾಷಣದಲ್ಲಿ ಇದಕ್ಕೆ ದನಿಗೂಡಿಸಿ ಇದೊಂದು ಅರ್ಥಪೂರ್ಣ ನಿರ್ಧಾರ. ಬಿ.ಟಿ. ರಂಜನ್ ಅವರ ಹೆಸರನ್ನು ಪತ್ರಿಕೋದ್ಯಮ ಜಗತ್ತು ಮರೆಯದ ರೀತಿಯಲ್ಲಿ ಕಾರ್ಯಕ್ರಮ ನಡೆಸಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ ತಮ್ಮ ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿ, ಬಿ.ಟಿ. ರಂಜನ್ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಜಿಲ್ಲಾ ಸಂಘದ ಸಂಪೂರ್ಣ ನೆರವಿದೆ ಎಂದರು.