ಸಕಲೇಶಪುರ: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಇಬ್ಬರು ಪುಟಾಣಿ ಮಕ್ಕಳು ಮೃತಪಟ್ಟ ದಾರುಣ ಘಟನೆ ಸಕಲೇಶಪುರ ತಾಲೂಕಿನ ಒನ್ನೂರು ಗ್ರಾಮದ ಎಸ್ಟೇಟ್ ವೊಂದರಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಐಬಿಸಿ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಾದ ಪ್ರಣಯ್ (7) ಮತ್ತು ನಿಶಾಂತ್ (5) ಮೃತಪಟ್ಟ ಪುಟಾಣಿಗಳು.
ಸ್ಥಳೀಯರ ಮಾಹಿತಿ ಪ್ರಕಾರ, ಐಬಿಸಿ ಎಸ್ಟೇಟ್ ನಲ್ಲಿ ಮಕ್ಕಳಿಬ್ಬರೂ ಆಟವಾಡುತ್ತಿದ್ದರು. ಈ ವೇಳೆ ಪಕ್ಕದಲ್ಲಿದ್ದ ಆಳವಾದ ಹೊಂಡದತ್ತ ತೆರಳಿದ ಮಕ್ಕಳು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಇದು ಗಮನಕ್ಕೆ ಬರುತ್ತಲೇ ಅವರನ್ನು ಹೊರತೆಗೆದರೂ, ಬದುಕುಳಿಸಲು ಸಾಧ್ಯವಾಗಿಲ್ಲ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.