ಮನೆ ಬಳಿಯ ರಸ್ತೆಯಲ್ಲಿ ಬಿದ್ದಿದ್ದ ಅಡಕೆ ಮಾದರಿಯ ವಸ್ತುವನ್ನು ಅಡಿಕೆ ಎಂದು ಭಾವಿಸಿ ಕಲ್ಲಿನಿಂದ ಚೂರು ಮಾಡುತ್ತಿದ್ದ ವೇಳೆ ಕಾಡು ಹಂದಿ ಬೇಟೆಗೆ ಇಡುವ ಸಿಡಿಮದ್ದು ಸ್ಫೋಟಗೊಂಡು ಮಹಿಳೆಯೊಬ್ಬರು ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಹುಲ್ಯಾಳು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಗಾವಡಗೆರೆ ಹೋಬಳಿಯ ಹುಲ್ಯಾಳು ಗ್ರಾಮದ ಲೋಕೇಶ್ರ ಪತ್ನಿ ಕಮಲಮ್ಮ ತೀವ್ರ ಗಾಯಗೊಂಡವರು.
ಶುಕ್ರವಾರ ಜಮೀನಿನಿಂದ ಮನೆಗೆ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ವಸ್ತುವನ್ನು ಅಡಿಕೆ ಎಂದು ಭಾವಿಸಿ ಮನೆ ಮುಂದೆಯೇ ಕಲ್ಲಿನಿಂದ ಜಜ್ಜುತ್ತಿದ್ದಂತೆ ಸಿಡಿಮದ್ದು ಏಕಾಏಕಿ ಸ್ಫೋಟಗೊಂಡು ಮುಖ, ಕೈ, ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ಅಸ್ವಸ್ಥಗೊಂಡಿದ್ದಾರೆ. ಜೋರಾದ ಶಬ್ದ ಕೇಳಿದ ಅಕ್ಕಪಕ್ಕದವರು ಧಾವಿಸಿ ತಕ್ಷಣವೇ ಕೆ.ಆರ್.ನಗರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದ ತೀವ್ರತೆಗೆ ಮನೆಯ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಭಾರೀ ಸ್ಫೋಟದ ಶಬ್ದ ಕೇಳಿದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಇವರು ತೋಟದ ಮನೆಯಲ್ಲಿ ವಾಸವಿದ್ದು, ವಾರಕ್ಕೆ 2-3 ಬಾರಿ ಗ್ರಾಮದೊಳಗಿನ ಮನೆಗೆ ಬಂದು ಬೆಕ್ಕಿಗೆ ಹಾಲು ನೀಡುತ್ತಿದ್ದರೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಸೋಕಲ್ ಟೀಮ್, ಬೆರಳಚ್ಚು ತಜ್ಞರು ಭೇಟಿ ಇತ್ತು ಪರಿಶೀಲಿಸಿದ್ದಾರೆ. ಎಸ್.ಪಿ.ವಿಷ್ಣುವರ್ಧನ್, ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಭೇಟಿ ನೀಡಿ ಪರಿಶೀಲಿಸಿ, ಅಕ್ಕಪಕ್ಕದ ನಿವಾಸಿಗಳಿಂದ ಮಾಹಿತಿ ಪಡೆದರು.



























