ಪುತ್ತೂರು: ಗೋಂದೋಳು ಪೂಜೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಪರ್ಲಡ್ಕ ಜಂಕ್ಷನ್ ಬಳಿಯ ಬೈಪಾಸ್ ರಸ್ತೆಯಲ್ಲಿ ನಡೆದ ಕಾರು ಪಲ್ಟಿ ಪ್ರಕರಣದಲ್ಲಿ ಮೃತಪಟ್ಟ ಮೂವರ ಗುರುತು ಪತ್ತೆಯಾಗಿದೆ.
ಮೃತಪಟ್ಟವರನ್ನು ಅವಿಭಜಿತ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಥಮ ಶಾಸಕರಾಗುದ್ದ ಸುಬ್ಬಯ್ಯ ನಾಯ್ಕ ಅವರ ಸಂಬಂಧಿಕರು ಎಂದು ಗುರುತಿಸಲಾಗಿದೆ.
ಸುಳ್ಯ ಜಟ್ಟಿಪಳ್ಳ ಕಾನತ್ತಿಲ ನಿವಾಸಿಗಳಾದ ನಿವೃತ್ತ ಪೋಸ್ಟ್ ಮಾಸ್ಟರ್ ಅಣ್ಣು ನಾಯ್ಕ, ಅವರ ಪುತ್ರ ಪ್ರಾವಿಡೆಂಟ್ ಫಂಡ್ ಅಕೌಂಟ್ ಆಫೀಸರ್ ಚಿದಾನಂದ, ಸಂಬಂಧಿಕ ರಮೇಶ್ ನಾಯ್ಕ ಮೃತಪಟ್ಟವರು.
ಪುಣಚದಲ್ಲಿ ಶುಕ್ರವಾರ ರಾತ್ರಿ ನಡೆದ ಗೋಂದೋಳು ಪೂಜೆ ಮುಗಿಸಿ, ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಇನ್ನೊಂದು ಕಾರು ಮುಂದೆ ಸಾಗಿದ್ದು, ಅಪಘಾತವಾದ ಕಾರು ಹಿಂದುಳಿದಿತ್ತು. ಪರ್ಲಡ್ಕ ಬಳಿ ಬೈಪಾಸ್ ರಸ್ತೆಗೆ ತಿರುಗಿ ಸ್ವಲ್ಪ ಮುಂದೆ ಸಾಗಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು, ಗ್ಯಾರೇಜ್ ಹಿಂಭಾಗದ ಆಳವಾದ ಪ್ರದೇಶಕ್ಕೆ ಉರುಳಿ ಬಿದ್ದಿದೆ.
ಸ್ಥಳದಲ್ಲಿ ಜನ ಜಮಾಯಿಸುತ್ತಿದ್ದಂತೆ, ಪೊಲೀಸರು ಜನರನ್ನು ನಿಯಂತ್ರಿಸಿದರು.
ಮೃತದೇಹಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.




















