ಬಾವಿ ತೋಡಲು ಸ್ಫೋಟಕಗಳನ್ನು ಬಳಸಿದ ಪರಿಣಾಮ ಸಮೀಪದ ಮನೆಗಳಿಗೆ ಹಾನಿಯಾಗಿರುವ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಭಾನುವಾರ ನಡೆದಿದೆ.
ಇನ್ನೊಂದೆಡೆ, ಸ್ಫೋಟವಾಗದೇ ಬಾವಿಯೊಳಗೆ ಉಳಿದಿದ್ದ ಸ್ಫೋಟಕ ಮದ್ದುಗಳನ್ನು ಹೊರತೆಗೆಯುವ ಕಾರ್ಯಾಚರಣೆಯನ್ನು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಮಂಗಳವಾರ ಬೆಳಿಗ್ಗೆ ಆರಂಭಿಸಿದ್ದಾರೆ.
ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಮೈಸೂರು ನಿವಾಸಿ ಸೋಮಶೇಖರ್ ಎಂಬುವವರು ತಮ್ಮ ಸಂಬಂಧಿಕರಿಂದ ಅಡಿಕೆ ಮರಗಳಿರುವ 23 ಸೆಂಟ್ಸ್ ಜಮೀನನ್ನು ಖರೀದಿಸಿದ್ದರು. ಈ ಜಮೀನಿನಲ್ಲಿ ನೀರಿಗಾಗಿ ಬಾವಿ ತೋಡುವ ಕೆಲಸ ನಡೆಯುತ್ತಿತ್ತು. ಸುಮಾರು 15 ಅಡಿ ಆಳದಲ್ಲಿ ಬಂಡೆ ಕಲ್ಲು ಸಿಕ್ಕಿದ ಕಾರಣ, ಬಂಡೆಯನ್ನು ಸಿಡಿಸಲು ಸ್ಫೋಟಕಗಳನ್ನು ಬಳಸಲಾಗಿತ್ತು ಎನ್ನಲಾಗಿದೆ.
ಭಾನುವಾರ ಸ್ಫೋಟಕಗಳನ್ನು ಸಿಡಿಸಿದ ರಭಸಕ್ಕೆ ಸಮೀಪದ ನಿವಾಸಿಗಳಾದ ವಾಮನ ಮೂಲ್ಯ ಮತ್ತು ಕೆ.ಟಿ. ಮೋಹನ್ ಎಂಬುವವರ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಘಟನೆಯಿಂದ ಆತಂಕಕ್ಕೊಳಗಾದ ನಿವಾಸಿಗಳು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಡಬ ಠಾಣೆಯ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾವಿಯೊಳಗೆ ಕೆಲವು ಸ್ಫೋಟಕಗಳು ಸಿಡಿಯದೆ ಬಾಕಿ ಉಳಿದಿದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಬೆಳಗ್ಗೆ ಬಾಂಬ್ ನಿಷ್ಕ್ರಿಯ ದಳ, ಅಗ್ನಿಶಾಮಕ ದಳದ ಸಿಬ್ಬಂದಿ, ಕಡಬ ಎಸ್ಐ ಜಂಬೂರಾಜ್ ಮತ್ತು ಎಫ್ಎಸ್ಎಲ್ ತಂಡ ಸ್ಥಳಕ್ಕೆ ಆಗಮಿಸಿ ಸ್ಫೋಟಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.




















