ಬೆಳ್ತಂಗಡಿ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ, ಗೇರುಕಟ್ಟೆ ಸರಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ ಅವರ ಅಸಹಜ ಸಾವು ಕುರಿತು ಸಮಗ್ರ ತನಿಖೆ ನಡೆಸಿ, ನ್ಯಾಯ ದೊರಕುವಂತೆ ಮಂಗಳವಾರ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ದೇವಸ್ಥಾನದ ಪ್ರದಾನ ಅರ್ಚಕ ವೇ.ಮೂ. ರಾಘವೇಂದ್ರ ಅಸ್ರಣ್ಣ ಅವರ ಉಪಸ್ಥಿತಿಯಲ್ಲಿ 108 ಬಾರಿ ಶ್ರೀ ದುರ್ಗಾದೇವಿ ನಾಮ ಜಪ ಮಾಡಿ, ಅಪರಾಧಿಗಳು ಬೇಗ ಪತ್ತೆಯಾಗುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ, ವಿಹಿಪಂ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ, ಜ. 14ರ ಮಕರ ಸಂಕ್ರಾತಿಯ ದಿನ ಬೆಳಗ್ಗೆ ಧನು ಪೂಜೆಗೆಂದು ಹೊರಟಿದ್ದ ಸಂದರ್ಭದಲ್ಲಿ ಮನೆಯಿಂದ ಕೂಗಳತೆಯ ದೂರದ ಕೆರೆಯಲ್ಲಿ ಅನುಮಾನಸ್ಪದವಾಗಿ ಶವ ಸಿಕ್ಕಿರುತ್ತದೆ. ಈಗಾಗಲೇ ದ.ಕ. ಜಿಲ್ಲೆ ವರಿಷ್ಠಾಧಿಕಾರಿ ದಕ್ಷ ಅಧಿಕಾರಿ ಅರುಣ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆ ಹಾಗೂ ತಾಲೂಕಿನ ದಕ್ಷ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಅಮಾಯಕ ಬಾಲಕನ ಅಸಹಜ ಸಾವಿನಿಂದ ಮನೆಯವರು ಹಾಗೂ ಊರವರು ಆತಂಕಕ್ಕೆ ಒಳಗಾಗಿದ್ದಾರೆ. ಈ ಪ್ರಕರಣಕ್ಕೆ ಅಂತ್ಯ ಹಾಡಿ ಮನೆಯವರಿಗೆ ನ್ಯಾಯ ಸಿಗುವಂತೆ ಆಗ್ರಹಿಸಿದರು.
ವಿಹಿಂಪ ಜಿಲ್ಲಾ ಸಹಸಂಯೋಜಕ ದಿನೇಶ್ ಚಾರ್ಮಾಡಿ, ಜಿಲ್ಲಾ ಗೋ ರಕ್ಷಾ ಪ್ರಮುಖ್ ಗಣೇಶ್ ಕಳೆಂಜ, ಬೆಳ್ತಂಗಡಿ ಪ್ರಖಂಡ ಕಾರ್ಯದರ್ಶಿ ರಮೇಶ್ ಧರ್ಮಸ್ಥಳ, ಸಹ ಕಾರ್ಯದರ್ಶಿ ಸತೀಶ್ ಮರಕಡ, ಬಜರಂಗದಳ ಸಂಯೋಜಕ ಪ್ರಭಾಕರ ಮುದಲಡ್ಕ, ಸಹ ಸಂಯೋಜಕ ಮೋಹನ್ ಕಂಚೇಲು ನಡ, ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಚಂದ್ರಕಾಂತ್ ನಿಡ್ಡಾಜೆ, ರಾಜೇಶ್ ಪೆಂರ್ಬುಡ, ದಯರಾಜ್ ಹೀರ್ಯ, ಕರುಣಾಕರ ಕೊರಂಜ, ಸದಾನಂದ ಶೆಟ್ಟಿ, ಗಣೇಶ್ ನಾಳ, ರಂಜನ್ ಮುದ್ದುಂಜ, ಗಣೇಶ್ ರಾವ್ ಗೇರುಕಟ್ಟೆ, ಪುರಂದರ ಗೇರುಕಟ್ಟೆ, ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಮನೀಶ್ ಮಚ್ಚಿನ, ಸುಕೇಶ್, ದಾಮೋದರ್, ಗಿರೀಶ್ ಗೇರುಕಟ್ಟೆ, ಭುವನೇಶ್ ಗೇರುಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.























