ಪುತ್ತೂರು: ಬೀರಮಲೆ ಬೆಟ್ಟದಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣದ ಇಬ್ಬರು ಆರೋಪಿಗಳಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜುಲೈ 5ರಂದು ಘಟನೆ ನಡೆದಿದ್ದು, ಆರೋಪಿಗಳಾದ ಆರ್ಯಾಪು ಗ್ರಾಮದ ರಾಮಚಂದ್ರ ಹಾಗೂ ಕಡಬದ ಕುದ್ಮಾರು ನಿವಾಸಿ ಪುರುಷೋತ್ತಮ ಅವರಿಗೆ ಜಾಮೀನು ದೊರೆತಿದೆ.
ಬೀರಮಲೆ ಬೆಟ್ಟದಲ್ಲಿ ಸುತ್ತಾಡುತ್ತಿದ್ದ ಜೋಡಿಯನ್ನು ಅಕ್ರಮವಾಗಿ ತಡೆದು ನಿಲ್ಲಿಸಿದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪಸರಿಸುವ ಬೆದರಿಕೆ ಹಾಕಿದ್ದರು. ಇದರ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ಬಂಧಿಸಿದ ಪೊಲೀಸರು, ಹಿರಿಯ ಸಿವಿಲ್ ಹಾಗೂ ಜೆಎಂಎಫ್.ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆರೋಪಿಗಳಿಗೆ ಬಂಧನ ನೋಟಿಸ್ ಜಾರಿಗೊಳಿಸದೇ ಬಂಧಿಸಿರುವುದನ್ನು ಮನಗಂಡ ನ್ಯಾಯಾಲಯವು ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು.
ಈ ನಡುವೆ ಆರೋಪಿಗಳನ್ನು ಮತ್ತೆ ಬಂಧಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯನ್ನು ಮನಗಂಡು, ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳ ಪರವಾಗಿ ವಕೀಲರಾದ ಅನಿಕೇತನ ಲಾ ಛೇಂಬರ್ಸ್’ನ ಕೃಷ್ಣಪ್ರಸಾದ್ ನಡ್ಸಾರ್, ಎಚ್ &ಡಿ ಲೀಗಲ್’ನ ದೀಪಕ್ ಬೊಳ್ವಾರು ವಾದಿಸಿದ್ದರು.