ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ಗಡಿಯಲ್ಲಿ ಸೈಬರ್ ಅಪರಾಧಗಳಿಂದ ರಕ್ಷಿಸಿದ್ದ 549 ಮಂದಿ ಭಾರತೀಯರನ್ನು ಬುಧವಾರ ಮರಳಿ ಕರೆತರಲಾಗಿದೆ. 2 ಮಿಲಿಟರಿ ವಿಮಾನಗಳನ್ನು ಬಳಸಿ ಇವರನ್ನು ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಐಟಿ ವಿಭಾಗದಲ್ಲಿ ಕೆಲಸ ಕೊಡಿಸುವ ಆಸೆ ತೋರಿಸಿ ಭಾರತೀಯರನ್ನು ಕರೆದೊಯ್ದು ಸೈಬರ್ ಅಪರಾಧಗಳಲ್ಲಿ ತೊಡಗಿಸಲಾಗಿತ್ತು. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಪಂಜಾಬ್ ಮತ್ತು ಉತ್ತರ ಪ್ರದೇಶಗಳಿಂದ ಜನರನ್ನು ಕರೆದೊಯ್ಯಲಾಗಿತ್ತು. ಚೀನ ಸೈಬರ್ ಅಪರಾಧಿಗಳು ಬಳಕೆ ಮಾಡುತ್ತಿದ್ದ ಕೇಂದ್ರಗಳಲ್ಲಿ ಇವರನ್ನು ಕೆಲಸಕ್ಕೆ ದೂಡಿರುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ.
ಭಾರತೀಯರೊಂದಿಗೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಜನರನ್ನು ಸಹ ರಕ್ಷಣೆ ಮಾಡಲಾಗಿದೆ. ಇವರಲ್ಲಿ 266 ಮಂದಿಯನ್ನು ಮಂಗಳವಾರ ಹಾಗೂ 283 ಮಂದಿಯನ್ನು ಬುಧವಾರ ಸಿ-17 ವಿಮಾನದಲ್ಲಿ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.