ಉತ್ತರಪ್ರದೇಶದ ಸಂಭಾಲ್ನಲ್ಲಿ ಸೋಮವಾರ (ಮಾ.10) ಅಪರಿಚಿತರ ತಂಡವೊಂದು ವಿಷಪೂರಿತ ಇಂಜೆಕ್ಷನ್ ಚುಚ್ಚಿ ಬಿಜೆಪಿ ನಾಯಕನನ್ನು ಹತ್ಯೆಗೈದಿರುವ ಘಟನೆ ನಡೆದಿದೆ.
ದಫ್ತಾರಾ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗುಲ್ಬಾಮ್ ಸಿಂಗ್ ಯಾದವ್ ಅವರ ಬಳಿ ಬೈಕ್ನಲ್ಲಿ ಬಂದ ಮೂವರು ಅಪರಿಚಿತರು ಮಾತನಾಡಲು ಬಂದಿದ್ದು, ನೀರು ಕೇಳಿದ್ದಾರೆ. ನೀರು ಕುಡಿದ ಕೆಲವೇ ಸಮಯದಲ್ಲಿ ಮೂವರಲ್ಲಿ ಓರ್ವ ತನ್ನ ಕೈಯಲ್ಲಿದ್ದ ವಿಷಪೂರಿತ ಚುಚ್ಚು ಮದ್ದನ್ನು ಯಾದವ್ ಅವರ ಹೊಟ್ಟೆಗೆ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಕೂಡಲೇ ಅಸ್ವಸ್ಥಗೊಂಡು ಚುಚ್ಚು ಮದ್ದಿನ ನೋವು ತಾಳಲಾರದೆ ಯಾದವ್ ಅವರು ಕಿರುಚಲು ಶುರು ಮಾಡಿದ್ದಾರೆ. ಕುಟುಂಬದ ಸದಸ್ಯರು ಅಕ್ಕಪಕ್ಕದವರು ಸೇರಿ ಪಕ್ಕದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಅಲ್ಲಿಂದ ಅಲಿಗಢ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಆದರೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿ ಕ್ಯಾಮೆರಾ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.