ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ (AR Rahman) ಅವರು ಹಾಡೊಂದನ್ನು ನಕಲು ಮಾಡಿದ್ದಾರೆ ಎನ್ನುವ ಆರೋಪ ಸಾಬೀತಾಗಿದ್ದು, ಈ ಕುರಿತು ದೆಹಲಿ ಹೈಕೋರ್ಟ್ ಭಾರೀ ಪ್ರಮಾಣದ ದಂಡವನ್ನು ವಿಧಿಸಿದೆ.
ಮಣಿರತ್ನಂ (Mani Ratnam) ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ -2’ ಚಿತ್ರದಲ್ಲಿ ‘ವೀರ ರಾಜ ವೀರ’ ಎಂಬ ಹಾಡೊಂದು ಇದೆ. ಇದರಲ್ಲಿ ಜಯಂ ರವಿ ಮತ್ತು ಶೋಭಿತಾ ಧುಲಿಪಾಲ ಕಾಣಿಸಿಕೊಂಡಿದ್ದರು.
ಈ ಹಾಡನ್ನು ಶಿವ ಸ್ತುತಿಯಿಂದ ಕದ್ದಿದ್ದು, ಶಿವ ಸ್ತುತಿಯನ್ನು ತಮ್ಮ ತಂದೆ ಮತ್ತು ತಮ್ಮ ಚಿಕ್ಕಪ್ಪನವರು ಕಂಪೋಸ್ ಮಾಡಿದ್ದರು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭಾರತೀಯ ಶಾಸ್ತ್ರೀಯ ಗಾಯಕ ಉಸ್ತಾದ್ ಫೈಯಾಜ್ ವಾಸಿಫುದ್ದೀನ್ ದಾಗರ್ ಚಿತ್ರತಂಡದ ವಿರುದ್ಧ ಕಾಪಿರೈಟ್ಸ್ ಆರೋಪವನ್ನು ಮಾಡಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹಾಡನ್ನು ನಕಲು ಮಾಡಲಾಗಿದೆ. ಹಾಡಿನಲ್ಲಿನ ರಾಗ, ಸಂಗೀತ, ಬೀಟ್ಗಳನ್ನು ಸಹ ಯಾವುದೇ ಬದಲಾವಣೆ ಇಲ್ಲದೆ ಚಿತ್ರತಂಡ ಇದನ್ನು ಬಳಸಿಕೊಂಡಿದೆ ಎಂದು ಅರ್ಜಿಯಲ್ಲಿ ಹೇಳಿದ್ದರು.
2023ರಲ್ಲಿ ಕೋರ್ಟ್ಗೆ ಈ ಸಂಬಂಧ ದಾವೆ ಹೂಡಲಾಗಿತ್ತು. ಇದೀಗ ಈ ಸಂಬಂಧ ಕೋರ್ಟ್ ತೀರ್ಪು ನೀಡಿದೆ.
ವಿಚಾರಣೆ ನಡೆಸಿದ ಕೋರ್ಟ್ ಹಾಡನ್ನು ಶಿವ ಸ್ತುತಿಯಿಂದ ನಕಲು ಮಾಡಿದ್ದು ಸಾಬೀತಾಗಿದ್ದು, ಕೆಲ ಬದಲಾವಣೆಗಳು ಅದಕ್ಕೆ ಹೋಲುತ್ತದೆ ಎಂದು ಕೋರ್ಟ್ ಹೇಳಿದೆ.
ಎ.ಆರ್. ರೆಹಮಾನ್, ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ 2 ಕೋಟಿ ರೂ. ಠೇವಣಿ ಇಡುವಂತೆ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಆದೇಶಿಸಿದ್ದಾರೆ.
ಉಸ್ತಾದ್ ಫೈಯಾಜ್ ವಾಸಿಫುದ್ದೀನ್ ಅವರಿಗೆ 2 ಲಕ್ಷ ರೂಪಾಯಿ ಪಾವತಿಸಬೇಕು. ಎಲ್ಲಾ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಜೂನಿಯರ್ ಡಾಗರ್ ಬ್ರದರ್ಸ್ಗೆ ಕ್ರೆಡಿಟ್ ನೀಡುವಂತೆ ನ್ಯಾಯಾಲಯವು ನಿರ್ಮಾಣ ಸಂಸ್ಥೆಗೆ ನಿರ್ದೇಶನ ನೀಡಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಎ.ಆರ್. ರೆಹಮಾನ್, ಮದ್ರಾಸ್ ಟಾಕೀಸ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.