ಬೆಳ್ತಂಗಡಿ: ಪ್ರಯಾಗ್ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಉತ್ತರ ಭಾರತದ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯ ಪಟ್ಟಾಭಿಷೇಕವು ಜ.31ರಂದು ಜುನಾ ಅಖಾಡದ ಮೂಲಕ ನೆರವೇರಿತು.
ಇದು ಕರ್ನಾಟಕಕ್ಕೆ ಒಲಿದ ಮೊದಲ ಮಹಾಮಂಡಲೇಶ್ವರ ಪದವಿಯಾಗಿದೆ.
ಈ ಪದವಿಯನ್ನು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಪ್ರದಾನ ಮಾಡುವುದು ಅಖಾಡದ ವಾಡಿಕೆ. ಈ ಪದವಿಗೆ ಅರ್ಹರಾದವರು ಸ್ವತಂತ್ರ ಪೀಠಾಧೀಶರಾಗಿರಬೇಕಾಗಿದೆ. ಪಟ್ಟಾಭಿಷೇಕಕ್ಕೂ ಮುನ್ನ ಅಖಾಡದಲ್ಲಿರುವ ಕ್ಯಾಬಿನೆಟ್ ಸದಸ್ಯರು ಸ್ವಾಮೀಜಿವರ ಆಧ್ಯಾತ್ಮಿಕ ಸತ್ಸಂಗವನ್ನು ಪರಿಶೀಲಿಸಿ ಬೈಠಕ್ನಲ್ಲಿ ಚರ್ಚಿಸಿ ಗೌರವ ಪ್ರದಾನ ಮಾಡುವುದಾಗಿದೆ. ಶ್ರೀಗಳು ಮುಂದೆ ರಾಷ್ಟ್ರಾದ್ಯಂತ ಧರ್ಮ ಪ್ರಚಾರದ ಜತೆಗೆ ಆಧ್ಯಾತ್ಮದ ಉನ್ನತ ಸಾಧನೆಗಾಗಿ ಧಾರ್ಮಿಕ ಮೌಲ್ಯಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಅರ್ಹತೆ ಉಳ್ಳವರಾಗಿದ್ದಾರೆಂದು ಪರಿಗಣಿಸಿ ನಾಗಾ ಸಾಧು ಸನ್ಯಾಸಿ ಪರಂಪರೆಯಲ್ಲಿ ಜುನಾ ಅಖಾಡ ಈ ಜವಾಬ್ದಾರಿಯನ್ನು ನೀಡಿದೆ.
ಕರ್ನಾಟಕಕ್ಕೆ ಬಂದಿರುವ ಮೊದಲ ಪದವಿ
ದಕ್ಷಿಣ ಭಾರತದಲ್ಲಿ ಮಹಾಮಂಡಲೇಶ್ವರ ಪಟ್ಟ ನೀಡಿದ್ದು ವಿರಳ. ಸ್ವಾಮೀಜಿಗಳ ಪೈಕಿ ಕನ್ಯಾಡಿ ಶ್ರೀರಾಮಕ್ಷೇತ್ರದ ಸದ್ಗರು ಶ್ರೀಗಳ ಮೂಲಕ ಇದು ಕರ್ನಾಟಕಕ್ಕೆ ಬರುವ ಪ್ರಪ್ರಥಮ ಮಹಾಮಂಡಲೇಶ್ವರ ಪದವಿಯಾಗಿದೆ. ಈ ಪಟ್ಟಾಭಿಷೇಕರಾದವರಿಗೆ ಧಾರ್ಮಿಕ ಪುರುಷನಿಗೆ
ರಾಷ್ಟ್ರಾದ್ಯಂತ ವಿಶೇಷ ಸೌಲಭ್ಯ ನೀಡಲಾಗುತ್ತದೆ. ವಾರಾಣಸಿಯ ಪಂಚದಶನಾಮ್ ಜುನಾ ಅಖಾಡದಲ್ಲಿರುವ ಸಾಧು ಸಮಾಜದ ಮಹಾಮಂಡಲೇಶ್ವರ ಆಚಾರ್ಯರಾದ ಅವದೇಶಾನಂದ ಗಿರಿ ಮಹಾರಾಜರು ಶುಕ್ರವಾರ ಈ ಪುಣ್ಯ ಕಾರ್ಯದ ಪಟ್ಟಾಭಿಷೇಕವನ್ನು ಮಹಾಕುಂಭಮೇಳದಲ್ಲಿ ನಿರ್ವಹಿಸಿದರು.
ಜ.31 ರಂದು ಪ್ರಯಾಗ್ರಾಜ್ ಮಹಾಕುಂಭಮೇಳದಲ್ಲಿ ಮಹಾಮಂಡಲೇಶ್ವರರಾಗಿ ಕುಂಭಮೇಳ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಜುನಾ ಅಖಾಡದ ಅಧ್ಯಕ್ಷರಾದ ಹರಿಗಿರಿ ಮಹಾರಾಜ್, ಜುನಾ ಅಖಾಡ ಉಪಾಧ್ಯಕ್ಷರಾದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಜುನಾ ಅಖಾಡದ ಉತ್ತಾರಾಖಂಡ ಮಹಾಮಂತ್ರಿ ದೇವಾನಂದ ಮಹಾರಾಜ್, ಕೋಶಾಧಿಕಾರಿ ಧೀರಜ್ ಗಿರಿ. ಕನ್ಯಾಡಿ ಶ್ರೀರಾಮ ಕ್ಷೇತ್ರದ ಟ್ರಸ್ಟೀತುಕಾರಾಮ್ ಸಾಲ್ಯಾನ್, ಕೃಷ್ಣಪ್ಪ ಗುಡಿರ್ಗಾ, ರವೀಂದ್ರ ಪೂಜಾರಿ ಆರ್ಲ, ಹರ್ಷಿತ್ ಉಪಸ್ಥಿತರಿದ್ದರು.
ಫೆ. 2ರಂದು ಶ್ರೀಗಳು ಕನ್ಯಾಡಿಗೆ
ಶ್ರೀಗಳು ಕನ್ಯಾಡಿಗೆ ಫೆ.2 ರಂದು ಆಗಮಿಸಲಿದ್ದು, ಮಾರ್ಚ್ ತಿಂಗಳಲ್ಲಿ ಸಾರ್ವಜನಿಕರಿಂದ ಅಭಿನಂದನಾ ಸಮಾರಂಭ ನಡೆಯಲಿದೆ.
ಮಹಾಕುಂಭ ಎಂಬುದು ವಿಶ್ವಕ್ಕೆ ಧಾರ್ಮಿಕ ಪ್ರಜ್ಞೆಯ ದಿಕ್ಕೂಚಿಯಾಗಿತ್ತು. ಐದು ವರ್ಷದ ಮಕ್ಕಳಿಂದ ಹಿಡಿದು 120 ವರ್ಷದ ವೃದ್ಧರವರೆಗೆ ತ್ರಿವೇಣಿ ಸಂಗಮದಲ್ಲಿ ಮುಳುಗಿ ಪಾವನರಾಗಿದ್ದಾರೆ. 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳದಲ್ಲಿ ಅಮೃತ ಉತ್ಪತ್ತಿಯಾಗುತ್ತದೆ ಎಂಬ ಪ್ರತೀತಿ ಅದರಲ್ಲೂ 144 ವರ್ಷಕ್ಕೊಮ್ಮೆ ಬರುವ ಈ ಮಹಾಕುಂಭದಲ್ಲಿ ಹಿಮಾಲಯದ ದೊಡ್ಡದೊಡ್ಡ ಸಾಧಕರು ಬಂದು ಆನಡಿಯ ಪಾವಿತ್ರ್ಯವನ್ನು ಹೆಚ್ಚಿಸುತ್ತಾರೆ. ನಮ್ಮನ್ನ ರಥದ ಮೂಲಕ ಕರೆದೊಯ್ದು ಪುಣ್ಯ ಸ್ನಾನಮಾಡಿಸಿದ್ದಾರೆ. ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ, ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರು