ಉಳ್ಳಾಲ: ಡಿ.8ರಂದು ಮಂಜನಾಡಿ ಗ್ರಾಮದ ಖಂಡಿಕೆ ಎಂಬಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ ಹಾಗೂ ಮೂವರು ಮಕ್ಕಳು ಗಂಭೀರ ಗಾಯಗೊಂಡ ಪ್ರಕರಣದಲ್ಲಿ ಬಾಲಕಿಯೊಬ್ಬಳು ಗುರುವಾರ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ ಎರಡಕ್ಕೇರಿದೆ.
ರಾತ್ರಿ ಮನೆಯಲ್ಲಿ ಮಲಗಿದ್ದ ಸಂದರ್ಭ ಗ್ಯಾಸ್ ಸ್ಪೋಟಗೊಂಡು ಇಡೀ ಮನೆ ಹೊತ್ತಿಯುರಿದು, ಮನೆಯೊಳಗಿದ್ದ ತಾಯಿ ಖುಬ್ರಾ ಹಾಗೂ ಮೂವರು ಮಕ್ಕಳಾದ ಮಹದಿಯಾ, ಮಝಿಯಾ, ಮಾಯಿಝ ಎಂಬವರು ಗಂಭೀರ ಗಾಯಗಳೊಂದಿಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಡಿ.13ರಂದು ತಾಯಿ ಖುಬ್ರಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗುರುವಾರ ಬಾಲಕಿ ಮೆಹದಿಯಾ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಉಳಿದ ಮಕ್ಕಳ ಚಿಕಿತ್ಸೆ ಮುಂದುವರಿದಿದೆ.